ಬ್ರಸೆಲ್ಸ್: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಇತ್ತೀಚೆಗೆ ನಡೆದ ಸಂಘರ್ಷವು ಎರಡು ರಾಷ್ಟ್ರಗಳ ನಡುವಿನ ಕದನವಲ್ಲ; ಇದು ಭಯೋತ್ಪಾದನೆ ಮೂಲೋತ್ಪಾಟನೆಯ ಸಮರ ಎಂದು ಬೆಲ್ಜಿಯಂನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
ಇದನ್ನು (ಭಯೋತ್ಪಾದನೆ) ಹೀಗೆಯೇ ಬಿಟ್ಟರೆ ಪಶ್ಚಿಮ ರಾಷ್ಟ್ರಗಳನ್ನೂ ಕಾಡಲು ಆರಂಭಿಸುತ್ತದೆ ಎಂದು ಜೈಶಂಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಐರೋಪ್ಯ ರಾಷ್ಟ್ರದ ಸುದ್ದಿ ಜಾಲ ‘ಯುರೈಕ್ಟೀವ್’ಗೆ ಬುಧವಾರ ನೀಡಿದ ಸಂದರ್ಶನದಲ್ಲಿ ಈ ವಿಚಾರ ತಿಳಿಸಿದ ಜೈಶಂಕರ್, ಪಹಲ್ಗಾಮ್ ದಾಳಿಗೆ ಭಾರತ ನೀಡಿದ ‘ಆಪರೇಷನ್ ಸಿಂಧೂರ’ ಪ್ರತ್ಯುತ್ತರದ ಬಗ್ಗೆ ಮಾಹಿತಿ ನೀಡಿದ್ದಾರೆ.
‘ಒಸಾಮ ಬಿನ್ ಲಾಡೆನ್ ಎಂಬಾತನಿದ್ದ. ಆತ ಏಕೆ ಪಶ್ಚಿಮ ತುದಿಗೆ ಸಮಾನಾಂತರವಾಗಿರುವ ಪಾಕಿಸ್ತಾನ ಸೇನಾ ನಗರ ತನಗೆ ಸುರಕ್ಷಿತ ಎಂದು ಭಾವಿಸಿ ಸುಮಾರು ವರ್ಷಗಳ ಕಾಲ ಅಲ್ಲಿ ನೆಲಸಿದ್ದ’ ಎಂದು ಜೈಶಂಕರ್ ಪ್ರಶ್ನಿಸಿದ್ದಾರೆ.
‘ಆಪರೇಷನ್ ಸಿಂಧೂರ’ಕ್ಕೆ ಎರಡು ಪರಮಾಣು ರಾಷ್ಟ್ರಗಳ ನಡುವಿನ ಜಿದ್ದಾಜಿದ್ದಿ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ಚೌಕಟ್ಟು ಹಾಕುತ್ತಿರುವುದನ್ನು ಜೈಶಂಕರ್ ಟೀಕಿಸಿದ್ದಾರೆ.
ರಷ್ಯಾ ವಿರುದ್ಧ ಪ್ರತಿಬಂಧ ಹಾಕಿದ್ದನ್ನು ಭಾರತ ಏಕೆ ಬೆಂಬಲಿಸಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಉಕ್ರೇನ್ ಮತ್ತು ರಷ್ಯಾ ಜತೆ ಭಾರತ ಗಟ್ಟಿಯಾದ ಸಂಬಂಧ ಹೊಂದಿದೆ. ಯುದ್ಧದ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಾಗದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.