ADVERTISEMENT

ಮತ್ತೊಂದು ಸರ್ಜಿಕಲ್‌ ಸ್ಟ್ರೈಕ್‌ಗೆ ಭಾರತ ಯೋಜನೆ ರೂಪಿಸುತ್ತಿದೆ: ಪಾಕ್‌ ಆರೋಪ

ಏಜೆನ್ಸೀಸ್
Published 19 ಡಿಸೆಂಬರ್ 2020, 7:40 IST
Last Updated 19 ಡಿಸೆಂಬರ್ 2020, 7:40 IST
ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ
ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ    

ಅಬುಧಾಬಿ: ನಮ್ಮ ದೇಶದ ಮೇಲೆ ಮತ್ತೊಂದು ಸರ್ಜಿಕಲ್‌ ಸ್ಟ್ರೈಕ್‌ ನಡೆಸಲು ಭಾರತ ಯೋಜನೆ ರೂಪಿಸುತ್ತಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಆರೋಪಿಸಿದ್ದಾರೆ.

ಅಬುಧಾಬಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, 'ಪಾಕಿಸ್ತಾನದ ಮೇಲೆ ಮತ್ತೊಂದು ದಾಳಿ ನಡೆಸಲು ಭಾರತವು ಯೋಜನೆ ರೂಪಿಸುತ್ತಿದೆ. ಆ ಮೂಲಕ ಪಾಕಿಸ್ತಾನದಲ್ಲಿ ಪ್ರಾಯೋಜಿತ ಭಯೋತ್ಪಾದನೆಯನ್ನು ಹುಟ್ಟುಹಾಕಲು ಭಾರತ ಸಿದ್ದತೆ ನಡೆಸಿದೆ. ಈ ಬಗ್ಗೆ ನಮ್ಮ ಗುಪ್ತಚರ ಇಲಾಖೆಯಿಂದ ವಿಶ್ವಾಸಾರ್ಹ ಮಾಹಿತಿ ಲಭ್ಯವಾಗಿದೆ' ಎಂದು ತಿಳಿಸಿದ್ದಾರೆ.

'ಸರ್ಕಾರದ ವಿಫಲ ನೀತಿಗಳಿಂದ ಭಾರತವು ಹಲವು ಆಂತರಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಕಾಶ್ಮೀರದ ಸಮಸ್ಯೆ, ರೈತರ ಪ್ರತಿಭಟನೆ, ಕೋವಿಡ್‌ ಸಾಂಕ್ರಾಮಿಕದಂತಹ ಸಂಕಷ್ಟಗಳನ್ನು ಭಾರತವು ನಿಭಾಯಿಸಬೇಕಿದೆ. ಈ ಬಿಕ್ಕಟ್ಟುಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ನವದೆಹಲಿಯಲ್ಲಿ ಯೋಜನೆಯೊಂದು ರೂಪಗೊಳ್ಳುತ್ತಿದೆ. ಪಾಕಿಸ್ತಾನದ ಮೇಲೆ ಮತ್ತೊಂದು ದಾಳಿ ನಡೆಸುವುದೇ ಆ ಯೋಜನೆಯ ಉದ್ದೇಶವಾಗಿದೆ' ಎಂದು ಹೇಳಿದ್ದಾರೆ.

ADVERTISEMENT

ಒಂದು ವೇಳೆ ಭಾರತವು ಇಂತಹ ದಾಳಿ ನಡೆಸಿದರೆ, ಅದಕ್ಕೆ ತಕ್ಕ ಉತ್ತರವನ್ನು ನಾವು ನೀಡಲಿದ್ದೇವೆ ಎಂದು ಖುರೇಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.