ಗ್ಲಾಸ್ಗೋ: ‘ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ನಡೆಯುವ ಯಾವುದೇ ಪ್ರಯತ್ನಕ್ಕೆ ಭಾರತ ಮತ್ತಷ್ಟು ಶಕ್ತಿ ತುಂಬಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆ ಶೃಂಗಸಭೆ ಸಂದರ್ಭದಲ್ಲಿ ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ಮೋದಿ ಈ ಮಾತುಗಳನ್ನಾಡಿದರು.
‘ರೋಮ್ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭೇಟಿ ಮಾಡಿದ ನಂತರ, ಈಗ ಗ್ಲಾಸ್ಗೋದಲ್ಲಿ ಮತ್ತೊಮ್ಮೆ ನಿಮ್ಮನ್ನು ಭೇಟಿ ಮಾಡುತ್ತಿರುವುದು ಸಂತೋಷ ತಂದಿದೆ. ಈ ಹಿಂದೆ ಹೇಳಿದ ಹಾಗೆ, ಸುಸ್ಥಿರ ಅಭಿವೃದ್ಧಿಗಾಗಿ ನಡೆಯುವ ಯಾವುದೇ ಪ್ರಯತ್ನಕ್ಕೆ ಭಾರತ ಮತ್ತಷ್ಟು ಶಕ್ತಿ ತುಂಬುವುದು’ ಎಂದು ಲೆಯೆನ್ ಅವರೊಂದಿಗಿನ ಮಾತುಕತೆ ಬಳಿಕ ಮೋದಿ ಟ್ವೀಟ್ ಮಾಡಿದ್ದಾರೆ.
ಲೆಯೆನ್ ಅವರೂ ಟ್ವೀಟ್ ಮಾಡಿದ್ದು, ‘ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ವ್ಯಾಪಾರ ವೃದ್ಧಿಗೆ ಚಾಲನೆ ನೀಡಲು ಸಮ್ಮತಿಸಿದ್ದೇವೆ. ತಂತ್ರಜ್ಞಾನ ಹಾಗೂ ನಾವೀನ್ಯ ಕ್ಷೇತ್ರಗಳೂ ಸೇರಿದಂತೆ ಹವಾಮಾನ ಬದಲಾವಣೆ ತಡೆಗೆ ಸಂಬಂಧಿಸಿ ಹಾಗೂ ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಸಹಕಾರ ಹೆಚ್ಚಿಸಲು ನಾವು ಶ್ರಮಿಸಲು ತೀರ್ಮಾನಿಸಿದ್ದೇವೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.