ಸಿಂಗಪುರ: ದೇಶದ ಅತಿ ಪುರಾತನ ಹಿಂದೂ ದೇವಾಲಯಕ್ಕೆ ಸೇರಿದ 20 ಲಕ್ಷ ಸಿಂಗಪುರ ಡಾಲರ್ ಮೌಲ್ಯದ ಆಭರಣವನ್ನು ಗಿರವಿ ಇಡುವ ಮೂಲಕ ಭಾರತ ಮೂಲದ 37 ವರ್ಷದ ಮುಖ್ಯ ಅರ್ಚಕ ವಿಶ್ವಾಸ ದ್ರೋಹದ ಕ್ರಿಮಿನಲ್ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಕ್ರಿಮಿನಲ್ ವಿಶ್ವಾಸದ್ರೋಹಕ್ಕೆ ಸಂಬಂಧಿಸಿದಂತೆ ಅರ್ಚಕ ಕಂದಸ್ವಾಮಿ ಸೇನಾಪತಿ ವಿರುದ್ಧ ಐದು ಆರೋಪಗಳನ್ನು ಹೊರಿಸಲಾಗಿದೆ. ಭ್ರಷ್ಟಾಚಾರ, ಡ್ರಗ್ಸ್ ಸಾಗಣೆ ಆರೋಪವೂ ಇದರಲ್ಲಿ ಸೇರಿದೆ ಎಂದು ಚಾನಲ್ ನ್ಯೂಸ್ ಏಷಿಯಾ ವರದಿ ಮಾಡಿದೆ.
ಕಂದಸ್ವಾಮಿ ಇಲ್ಲಿನ ಶ್ರೀ ಮರಿಯಮ್ಮ ದೇವಸ್ಥಾನದ ಮುಖ್ಯ ಅರ್ಚಕರು. ದೇಗುಲದ ಆಭರಣಗಳನ್ನು 2016 ರಿಂದ 2020ರ ಅವಧಿಯಲ್ಲಿ ಪದೇ ಪದೇ ಅವರು ಗಿರವಿ ಇಟ್ಟಿದ್ದು, ಹಣವನ್ನು ತಮ್ಮ ವಹಿವಾಟಿಗೆ ಬಳಸಿದ್ದರು ಎಂದು ಆರೋಪಿಸಲಾಗಿದೆ.
ಗಿರವಿ ಇಟ್ಟಿದ್ದ ಮೊತ್ತದ ವಹಿವಾಟು ಸುಮಾರು ₹ 10.09 ಕೋಟಿ (2 ಮಿಲಿಯನ್ ಸಿಂಗಪುರ ಡಾಲರ್) ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 106,503 ಸಿಂಗಪುರ ಡಾಲರ್ ಅನ್ನು (₹ 77.4 ಲಕ್ಷ) ದೇಶದ ಹೊರಗೆ ನಿಯಮಬಾಹಿರವಾಗಿ ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.