ಕೊಲಂಬೊ: ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದು ಹಾಗೂ ಅದರಿಂದ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಶ್ರೀಲಂಕಾಕ್ಕೆ ನೆರವು ನೀಡುವ ಸಂಬಂಧ ಇಲ್ಲಿನ ಭಾರತದ ಹೈಕಮಿಷನ್ ವಿಶೇಷ ಸಭೆಯನ್ನು ಆಯೋಜಿಸಿತ್ತು.
‘ಪರಸ್ಪರರು ಸಹಕಾರ ತತ್ವವನ್ನು ಪಾಲಿಸುವ ಮೂಲಕ ದ್ವೀಪರಾಷ್ಟ್ರದ ಪ್ರಗತಿ ಹಾಗೂ ಪ್ರಸಕ್ತ ಬಿಕ್ಕಟ್ಟಿನಿಂದ ಪಾರಾಗುವ ಬಗೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಭಾರತೀಯ ಹೈಕಮಿಷನ್ ಬುಧವಾರ ಟ್ವೀಟ್ ಮಾಡಿದೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡೆಪ್ಯುಟಿ ಹೈಕಮಿಷನರ್ ವಿನೋದ್ ಕೆ.ಜಾಕೋಬ್,‘ಭಾರತ ಅನುಸರಿಸುತ್ತಿರುವ ‘ನೆರೆ ರಾಷ್ಟ್ರಗಳು ಮೊದಲು’ ನೀತಿ ಹಾಗೂ ‘ಸಾಗರ್’ ಕಾರ್ಯಕ್ರಮದಡಿ ಉಭಯ ದೇಶಗಳಿಗೆ ಪ್ರಯೋಜನವಾಗುವಂತಹ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಂಟಿಯಾಗಿ ಜಾರಿಗೊಳಿಸುವುದು, ಭಾರತ ಹಾಗೂ ಶ್ರೀಲಂಕಾ ಪ್ರಜೆಗಳ ಆಶೋತ್ತರಗಳಿಗೆ ಸ್ಪಂದಿಸುವುದು ಸಹ ಮುಖ್ಯ’ ಎಂದರು.
ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾಕ್ಕೆ ಭಾರತ ಹಣಕಾಸು ನೆರವು ನೀಡುತ್ತಿರುವುದು, ರಕ್ಷಣೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಹಕಾರದಂತಹ ವಿಷಯಗಳನ್ನು ಸಹ ಅವರು ಪ್ರಸ್ತಾಪಿಸಿದರು.
ಶ್ರೀಲಂಕಾ ಕೇಂದ್ರೀಯ ಬ್ಯಾಂಕ್ನ ಗವರ್ನರ್ ನಂದಲಾಲ್ ವೀರಸಿಂಘೆ, ಹಿರಿಯ ಅಧಿಕಾರಿಗಳು, ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರದ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.