ADVERTISEMENT

ವಿಮಾ ಕಂಪನಿಗಳಿಗೆ ವಂಚನೆ: ಭಾರತೀಯ ಸಂಜಾತನ ವಿರುದ್ಧ ದೂರು

ಪಿಟಿಐ
Published 10 ಆಗಸ್ಟ್ 2023, 14:48 IST
Last Updated 10 ಆಗಸ್ಟ್ 2023, 14:48 IST
   

ಸಿಂಗಪುರ: ಎರಡು ವಿಮಾ ಕಂಪನಿಗಳಿಗೆ ವಂಚಿಸಿದ ಆರೋಪದಲ್ಲಿ ಭಾರತೀಯ ಸಂಜಾತ ವ್ಯಕ್ತಿಯ ವಿರುದ್ಧ  ಇಲ್ಲಿನ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ಸಹಾ ರಂಜಿತ್‌ ಚಂದ್ರ (48) ಎಂಬುವವರು ಇಬ್ಬರು ವಿದೇಶಿ ಕಾರ್ಮಿಕರಿಗೆ ಅಂದಾಜು ₹47.30 ಲಕ್ಷ ವಿಮಾ ಹಣ ವಿತರಿಸುವ ಸಂಬಂಧ ಎರಡು ವಿಮಾ ಕಂಪನಿಗಳಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇಬ್ಬರು ಗಾಯಾಳು ಕಾರ್ಮಿಕರಿಗೆ ವಿಮಾ ಪರಿಹಾರ ನೀಡುವ ವಿಚಾರವಾಗಿ ವೈಟ್‌ಫೀಲ್ಡ್ ಲಾ ಕಾರ್ಪೊರೇಶನ್‌ನ ಅಧಿಕೃತ ವ್ಯಕ್ತಿಯ ಜೊತೆ ಮಾತುಕತೆ ನಡೆಸುವುದಾಗಿ ನಂಬಿಸಿ ಇವರು ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಹಲವು ಕಂಪನಿಗಳ ನಿರ್ದೇಶಕರಾಗಿರುವ ರಂಜಿತ್‌ ಚಂದ್ರ ಅವರು 2020 ಜುಲೈ ಮತ್ತು ಫೆಬ್ರುವರಿ 2021ರ ನಡುವೆ  ವೈಟ್‌ಫೀಲ್ಡ್ ಲಾ ಕಾರ್ಪೊರೇಶನ್‌ನ ಆಗಿನ ನಿರ್ದೇಶಕರಾಗಿದ್ದ ವಕೀಲ ಚಾರ್ಲ್ಸ್‌ ಯೋ ಯಾವೊ ಹುಯಿ ಎಂಬುವವರ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.

ಚಾರ್ಲ್ಸ್‌ ವಿರುದ್ಧವೂ ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಅವರ ವಿರುದ್ಧ 2022 ಆಗಸ್ಟ್‌ನಲ್ಲಿ ಬಂಧನ ವಾರಂಟ್‌ ಹೊರಡಿಸಲಾಗಿತ್ತು.

ಸರ್ಕಾರಿ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲೂ ರಂಜಿತ್‌ ಚಂದ್ರ ಆರೋಪಿಯಾಗಿದ್ದಾರೆ.

ಈ ಪ್ರಕರಣದಲ್ಲಿ ರಂಜಿತ್‌ ಚಂದ್ರ ಅವರು ದೋಷಿ ಎಂದು ಸಾಬೀತಾದರೆ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.