ವಿಶ್ವಸಂಸ್ಥೆ: ಸೌರಶಕ್ತಿಯ ಸಮರ್ಥ ಬಳಕೆ, ಕೈಗಾರಿಕಾ ನೀತಿಗಳಲ್ಲಿ ಬದಲಾವಣೆಗೆ ಭಾರತ ಒತ್ತು ನೀಡಿದೆ. ಈ ಕ್ಷೇತ್ರದಲ್ಲಿನ ಭಾರತದ ನಾಯಕತ್ವವು ಹವಾಮಾನ ಬದಲಾವಣೆ ತಡೆಯುವ ಗುರಿಯನ್ನು ನಾವು ಸಾಧಿಸಲಿದ್ದೇವೆ ಎಂಬ ಭರವಸೆಯನ್ನು ಮೂಡಿಸುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.
ವಿಶ್ವಸಂಸ್ಥೆ ಆಯೋಜಿಸಿದ್ದ ‘ಪೀಪಲ್ ಆ್ಯಂಡ್ ಕ್ಲೈಮೇಟ್– ಜಸ್ಟ್ ಟ್ರಾನ್ಸಿಷನ್ ಇನ ಪ್ರಾಕ್ಟೀಸ್’ ಎಂದು ವಿಷಯ ಕುರಿತ ಆನ್ಲೈನ್ ವಿಚಾರಸಂಕಿರಣದಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಪ್ರಧಾನ ಉಪ ಕಾರ್ಯದರ್ಶಿ ಅಮೀನಾ ಮೊಹಮ್ಮದ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಾಯುಮಾಲಿನ್ಯ ತಡೆಗಟ್ಟಲು ವಿವಿಧ ದೇಶಗಳಿಂದ ಉತ್ತಮ ಪ್ರಯತ್ನಗಳು ನಡೆಯುತ್ತಿವೆ. 2030ರ ವೇಳೆಗೆ ವಾಯುಮಾಲಿನ್ಯ ಪ್ರಮಾಣವನ್ನು ಶೇ 55ರಷ್ಟು ಕಡಿಮೆ ಮಾಡಲು ಐರೋಪ್ಯ ಒಕ್ಕೂಟ ಪಣ ತೊಟ್ಟಿದೆ ಎಂದು ಅಮೀನಾ ಹೇಳಿದರು.
ಬರುವ ದಿನಗಳಲ್ಲಿ ಕಲ್ಲಿದ್ದಲಿನ ಬಳಕೆ ಸಂಪೂರ್ಣ ನಿಲ್ಲಬೇಕು. ಈಗ ಚಾಲ್ತಿಯಲ್ಲಿರುವ ಕಲ್ಲಿದ್ದಲಿನ ಬಳಕೆಯನ್ನು ಐರೋಪ್ಯ ಒಕ್ಕೂಟ ಮತ್ತು ಇತರ ದೇಶಗಳು 2030ರ ವೇಳೆಗೆ ಹಂತಹಂತವಾಗಿ ಸ್ಥಗಿತಗೊಳಿಸಬೇಕು ಎಂದು ಹೇಳಿದರು.
ಕೋವಿಡ್–19ನಿಂದ ಎಲ್ಲ ರಾಷ್ಟ್ರಗಳ ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಈಗ ಆರ್ಥಿಕತೆಗೆ ಪುನಶ್ಚೇತನ ನೀಡಬೇಕಿದೆ. ಈ ಪುನಶ್ಚೇತನ ಕಾರ್ಯ ಸುಸ್ಥಿರ ಆರ್ಥಿಕತೆಗೆ ಮಾತ್ರ ಒತ್ತು ನೀಡದೇ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸುವಂತಾಗಬೇಕು ಎಂದೂ ಅವರು ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.