ADVERTISEMENT

ಇಂಡೋನೇಷ್ಯಾದ ಜೈಲಿನಲ್ಲಿ ಅಗ್ನಿ ಅವಘಡ; 41 ಜನರು ಸಾವು, 39 ಜನರಿಗೆ ಗಾಯ

ಏಜೆನ್ಸೀಸ್
Published 8 ಸೆಪ್ಟೆಂಬರ್ 2021, 3:27 IST
Last Updated 8 ಸೆಪ್ಟೆಂಬರ್ 2021, 3:27 IST
   

ಜಕಾರ್ತ: ಇಂಡೋನೇಷ್ಯಾದ ಬಾಂಟೆನ್ ಪ್ರಾಂತ್ಯದ ಜೈಲಿನಲ್ಲಿ ಸಂಭವಿಸಿರುವ ಅಗ್ನಿ ಅವಘಡದಲ್ಲಿ 41 ಜನರು ಮೃತಪಟ್ಟಿದ್ದು, 39 ಜನರು ಗಾಯಗೊಂಡಿದ್ದಾರೆ ಎಂದು ಕಾನೂನು ಮತ್ತು ಮಾನವ ಹಕ್ಕುಗಳ ಸಚಿವಾಲಯದ ಜೈಲು ಇಲಾಖೆಯ ವಕ್ತಾರ ರಿಕಾ ಅಪ್ರಿಯಂತಿ ತಿಳಿಸಿದ್ದಾರೆ.

ಮಾದಕ ದ್ರವ್ಯ ಅಪರಾಧಿಗಳಿಗಾಗಿ ಇರುವ ಜಕಾರ್ತದ ಹೊರವಲಯದಲ್ಲಿರುವ ತಂಗೇರಂಗ್ ಜೈಲಿನ ಬ್ಲಾಕ್ ಸಿ ಯಲ್ಲಿ ಉಂಟಾದ ಬೆಂಕಿ ಅವಘಡಕ್ಕೆ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಜೈಲು ಇಲಾಖೆಯ ವಕ್ತಾರ ರಿಕಾ ಅಪ್ರಿಯಂತಿ ತಿಳಿಸಿದ್ದಾರೆ.

1,225 ಕೈದಿಗಳನ್ನು ಇಡುವಷ್ಟು ಸಾಮರ್ಥ್ಯವಿರುವ ತಂಗೇರಂಗ ಜೈಲಿನಲ್ಲಿ 2,000ಕ್ಕಿಂತಲೂ ಹೆಚ್ಚು ಜನರಿದ್ದಾರೆ. ಬೆಂಕಿ ಸಂಭವಿಸಿದಾಗ ಬ್ಲಾಕ್ ಸಿನಲ್ಲಿ 122 ಅಪರಾಧಿಗಳಿದ್ದರು. ಬೆಂಕಿ ನಿಯಂತ್ರಿಸಲು ನೂರಾರು ಪೋಲಿಸರು ಮತ್ತು ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಅಪ್ರಿಯಂತಿ ತಿಳಿಸಿದ್ದಾರೆ.

ADVERTISEMENT

ಕೆಲವು ಗಂಟೆಗಳ ನಂತರ ಬೆಂಕಿಯನ್ನು ನಂದಿಸಲಾಗಿದೆ ಮತ್ತು ಎಲ್ಲಾ ಸಂತ್ರಸ್ತರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

ಇಂಡೋನೇಷ್ಯಾದಲ್ಲಿ ಗಲಭೆಗಳು ಸಾಮಾನ್ಯವಾಗಿದ್ದು, ಕಡಿಮೆ ವ್ಯವಸ್ಥೆಗಳಿರುವ ಜೈಲಿನಲ್ಲಿ ಅತಿಯಾದ ಕೈದಿಗಳಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಕಾನೂನುಬಾಹಿರ ಮಾದಕ ದ್ರವ್ಯಗಳ ವಿರುದ್ಧದ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.