ದುಬೈ : ಹಿಜಾಬ್ ವಿರೋಧಿ ಪ್ರತಿಭಟನೆಯಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದ ಒಂದು ಸಾವಿರ ಜನರ ವಿರುದ್ಧ ಟೆಹರಾನ್ನಲ್ಲಿ ಸಾರ್ವಜನಿಕವಾಗಿ ವಿಚಾರಣೆ ನಡೆಸುತ್ತೇವೆ ಎಂದು ಇರಾನ್ನ ಅಧಿಕಾರಿಗಳು ಸೋಮವಾರ ಘೋಷಿಸಿದ್ದಾರೆ. ಪ್ರತಿಭಟನಕಾರರ ವಿರುದ್ಧ ಇದೇ ಮೊದಲ ಬಾರಿಗೆ ಇರಾನ್ ಸರ್ಕಾರವು ಕಾನೂನು ಕ್ರಮ ಜರುಗಿಸಲು ಮುಂದಾಗಿದೆ.
ಭದ್ರತಾ ಪಡೆಗಳ ಮೇಲಿನ ದಾಳಿ, ಸಾರ್ವಜನಿಕ ಆಸ್ತಿಗೆ ಬೆಂಕಿ ಹಚ್ಚಿದಂಥ ‘ವಿಧ್ವಂಸಕ ಕ್ರಮಗಳ’ ಮೇಲೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಜೊತೆಗೆ, ಕೆಲವು ಪ್ರತಿಭಟನಕಾರರ ಮೇಲೆ, ‘ಭೂಮಿ ಮೇಲಿನ ಭ್ರಷ್ಟಾಚಾರ’, ‘ದೇವರ ವಿರುದ್ಧ ನಡೆಸಿದ ಯುದ್ಧ’ ಎಂಬಿತ್ಯಾದಿ ಆರೋಪಗಳನ್ನು ಸರ್ಕಾರ ಹೊರಿಸಿದೆ. ಈ ಆರೋಪಗಳಿಗಾಗಿ ಮರಣ ದಂಡನೆ ಶಿಕ್ಷೆ ವಿಧಿಸುವ ಕಾನೂನು ಇರಾನ್ನಲ್ಲಿದೆ.
‘ಇಂಥ ಗಲಭೆ ಪ್ರಕರಣಗಳನ್ನು ಹೆಚ್ಚು ನಿಖರತೆಯಿಂದ ಹಾಗೂ ತ್ವರಿತವಾಗಿ ನಮ್ಮ ನ್ಯಾಯಾಧೀಶರು ವಿಚಾರಣೆ ನಡೆಸಲಿದ್ದಾರೆ’ ಎಂದು ಇರಾನ್ನ ನ್ಯಾಯಾಂಗ ಇಲಾಖೆಯ ಮುಖ್ಯಸ್ಥ ಗುಲಾಂ ಹುಸೇನ್ ಮೊಹಸೇನಿ ಇಜಿ ಹೇಳಿದ್ದಾರೆ.
ಪತ್ರಿಭಟನೆಯಲ್ಲಿ ಇದುವರೆಗೂ 270 ಮಂದಿಯನ್ನು ಹತ್ಯೆ ಮಾಡಲಾಗಿದೆ. ಜೊತೆಗೆ 14,000 ಮಂದಿ ಪ್ರತಿಭಟನಕಾರರನ್ನು ಸರ್ಕಾರ ಬಂಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.