ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಅಲ್ಲಿನ ಮಕ್ಕಳು ನಲುಗಿ ಹೋಗಿದ್ದಾರೆ. ಇದು ಅವರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯುಸುಫಝೈ ಹೇಳಿದ್ದಾರೆ.
ಯುದ್ಧದ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕದನ ವಿರಾಮ ಘೋಷಿಸುವಂತೆ ಮನವಿ ಮಾಡಿದ್ದಾರೆ.
ಯುದ್ಧದಿಂದ ಮಕ್ಕಳಿಗೆ ಎಂದಿಗೂ ಒಳಿತಾಗುವುದಿಲ್ಲ. ಪವಿತ್ರ ಭೂಮಿಯಲ್ಲಿ ಶಾಂತಿ ಮತ್ತು ನ್ಯಾಯ ನೆಲೆಸಲೆಂದು ಹಂಬಲಿಸುತ್ತಿರುವ ಮಕ್ಕಳು ಹಾಗೂ ಜನರಿಗಾಗಿ ನಾನು ಮರುಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
2012ರಲ್ಲಿ ತಾಲಿಬಾನ್ ಹತ್ಯೆಯ ದಾಳಿಯಿಂದ ಬದುಕುಳಿದ ಮಲಾಲಾ, ತಾವು ಅನುಭವಿಸಿದ ನೋವನ್ನು ಹಂಚಿಕೊಂಡಿದ್ದಾರೆ. ‘ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭ, 11 ವರ್ಷದವಳಾಗಿದ್ದಾಗಲೇ ಯುದ್ಧ ಹಾಗೂ ಭಯೋತ್ಪಾದನೆಗೆ ಸಾಕ್ಷಿಯಾಗಿದ್ದೆ. ಶಾಲೆ ಮತ್ತು ಮಸೀದಿ ಬಾಂಬ್ ದಾಳಿಯಿಂದ ನಾಶವಾಗಿದ್ದವು. ಶಾಂತಿ ಎಂಬುದು ನಮಗೆ ಕನಸಿನ ಮಾತಾಗಿತ್ತು‘ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.