ಕ್ವಾಲಾಲಂಪುರ: 1ಎಂಬಿಡಿ (ಮಲೇಷ್ಯಾ ಡೆವಲಪ್ಮೆಂಟ್ ಬೆರ್ಹಾಡ್) ಹೂಡಿಕೆ ನಿಧಿಯ ಬಹುಕೋಟಿ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೇಷ್ಯಾ ಮಾಜಿ ಪ್ರಧಾನಿ ನಜೀಬ್ ರಜಾಕ್ ಅವರನ್ನು ಶುಕ್ರವಾರ ಖುಲಾಸೆಗೊಳಿಸಲಾಗಿದೆ.
ಎಂಡಿಬಿ ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ 12 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ನಜೀಬ್, ತಪ್ಪುಗಳನ್ನು ಮರೆ ಮಾಚಲು ಲೆಕ್ಕಪರಿಶೋಧನಾ ವರದಿ ತಿರುಚಿದ ಆರೋಪದಲ್ಲಿ ತಪ್ಪಿತಸ್ಥರಲ್ಲ ಎಂದು ಕಂಡುಬಂದಿದೆ.
2016ರಲ್ಲಿ ಎಂಡಿಬಿ ಲೆಕ್ಕಪರಿಶೋಧನಾ ವರದಿಯನ್ನು ಸಂಸತ್ತಿಗೆ ಮಂಡಿಸುವ ಮುನ್ನ ತಿದ್ದುಪಡಿಗೆ ಆದೇಶಿಸಲು ಪ್ರಧಾನಿ ಮತ್ತು ಹಣಕಾಸು ಸಚಿವರಾಗಿ ನಜೀಬ್ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಟರ್ ಗಳ ಬಳಿ ಸಾಕಷ್ಟು ಪುರಾವೆಗಳಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ ಎಂದು ಪ್ರತಿವಾದಿ ವಕೀಲ ಮೊಹಮ್ಮದ್ ಶಫಿ ಅಬ್ದುಲ್ಲಾ ಹೇಳಿದರು.
‘ನನ್ನ ಕಕ್ಷಿದಾರರು ಇಂದಿನ ನಿರ್ಧಾರಕ್ಕಾಗಿ ಅಲ್ಲಾಹನಿಗೆ ತುಂಬಾ ಕೃತಜ್ಞರಾಗಿದ್ದಾರೆ. ಇದು ನಿಜವಾಗಿಯೂ ಅವರ ಮುಗ್ಧತೆಗಾಗಿ ಹೋರಾಡುವ ಬಯಕೆ ಹೆಚ್ಚಿಸಿದೆ’ ಎಂದು ಶಫೀ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಲೇಷ್ಯಾ ಡೆವಲಪ್ಮೆಂಟ್ ಬೆರ್ಹಾಡ್ನಿಂದ ಅಪಾರ ಪ್ರಮಾಣದ ಹಣವನ್ನು ಮಾಜಿ ಪ್ರಧಾನಿ ಮತ್ತು ಅವರ ಆಪ್ತರು ಕಳವು ಮಾಡಿ ರಿಯಲ್ ಎಸ್ಟೇಟ್ನಿಂದ ಹಿಡಿದು ಸಣ್ಣ ಪ್ರಮಾಣದ ಕೆಲಸಕ್ಕೂ ಬಳಸಿದ್ದಾರೆ ಎಂಬ ಆರೋಪ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.