ADVERTISEMENT

ಹಮಾಸ್ ದಾಳಿಗೆ ಭಾರತವನ್ನು ಒಳಗೊಂಡ ಕಾರಿಡಾರ್‌ ಕಾರಣ: ಜೋ ಬೈಡನ್

ಪಿಟಿಐ
Published 26 ಅಕ್ಟೋಬರ್ 2023, 15:34 IST
Last Updated 26 ಅಕ್ಟೋಬರ್ 2023, 15:34 IST
<div class="paragraphs"><p> ಅಮೆರಿಕ ಅಧ್ಯಕ್ಷ ಜೋ ಬೈಡನ್</p></div>

ಅಮೆರಿಕ ಅಧ್ಯಕ್ಷ ಜೋ ಬೈಡನ್

   

ವಾಷಿಂಗ್ಟನ್: ‘ಭಾರತ–ಮಧ್ಯಪ್ರಾಚ್ಯ–ಯುರೋಪ್ ಆರ್ಥಿಕ ಕಾರಿಡಾರ್‌’ನ ಘೋಷಣೆಯು ಇಸ್ರೇಲ್‌ ಮೇಲೆ ಹಮಾಸ್ ಬಂಡುಕೋರರು ಈಚೆಗೆ ನಡೆಸಿದ ಭಯೋತ್ಪಾದಕ ದಾಳಿಗೆ ಒಂದು ಕಾರಣ ಎಂದು ತಮಗೆ ಬಲವಾಗಿ ಅನಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ನವದೆಹಲಿಯಲ್ಲಿ ಈಚೆಗೆ ನಡೆದ ಜಿ20 ಶೃಂಗಸಭೆಯಲ್ಲಿ ಈ ಕಾರಿಡಾರ್ ಯೋಜನೆಯ ಘೋಷಣೆ ಆಗಿದೆ.

ADVERTISEMENT

ಹಮಾಸ್ ದಾಳಿಯ ನಂತರದಲ್ಲಿ ಇಸ್ರೇಲ್‌ ಭಾರಿ ಪ್ರಮಾಣದಲ್ಲಿ ಪ್ರತಿದಾಳಿ ನಡೆಸುತ್ತಿದೆ. ಅಮೆರಿಕಕ್ಕೆ ಬಂದಿರುವ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಆಲ್ಬನೀಸ್ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೈಡನ್ ಅವರು, ಈ ಮಾತಿಗೆ ಪೂರಕವಾಗಿ ತಮ್ಮ ಬಳಿ ಆಧಾರ ಇಲ್ಲದಿದ್ದರೂ ತಮಗೆ ಬಲವಾಗಿ ಅನಿಸಿರುವುದನ್ನು ಹೇಳುತ್ತಿರುವುದಾಗಿ ತಿಳಿಸಿದ್ದಾರೆ.

‘ಇಸ್ರೇಲ್‌ ಅನ್ನು ಆ ಪ್ರದೇಶದೊಂದಿಗೆ ಬೆಸೆಯುವ ಹಾಗೂ ಒಟ್ಟಾರೆಯಾಗಿ ಇಡೀ ಪ್ರದೇಶವನ್ನು ಬೆಸೆಯುವ ದಿಕ್ಕಿನಲ್ಲಿ ನಾವು ಸಾಧಿಸಿದ ಪ್ರಗತಿಯು ಈ ದಾಳಿಗೆ ಕಾರಣ ಎಂದು ನನಗೆ ಅನಿಸಿದೆ. ಆದರೆ, ಈ ಕೆಲಸವನ್ನು ನಾವು ಹಿಂದೆ ಬಿಡಲಾಗದು’ ಎಂದು ಬೈಡನ್ ಅವರು ಹೇಳಿದ್ದಾರೆ.

ಹಮಾಸ್‌ ಬಂಡುಕೋರರು ನಡೆಸಿರುವ ಭಯೋತ್ಪಾದಕ ದಾಳಿಗೆ ಭಾರತ–ಮಧ್ಯಪ್ರಾಚ್ಯ–ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಇಸಿ) ಒಂದು ಕಾರಣವಾಗಿರಬಹುದು ಎಂದು ಬೈಡನ್ ಅವರು ಒಂದು ವಾರದ ಅವಧಿಯಲ್ಲಿ ಎರಡನೆಯ ಬಾರಿ ಹೇಳಿದ್ದಾರೆ.

ಈ ಆರ್ಥಿಕ ಕಾರಿಡಾರ್ ಯೋಜನೆಯನ್ನು ಹಲವರು ಚೀನಾದ ಬೆಲ್ಟ್ ಆ್ಯಂಡ್ ರೋಡ್ ಯೋಜನೆಗೆ ಪರ್ಯಾಯ ಎಂದು ಭಾವಿಸಿದ್ದಾರೆ. ಈ ಯೋಜನೆಯನ್ನು ಅಮೆರಿಕ, ಭಾರತ, ಸೌದಿ ಅರೇಬಿಯಾ, ಯುಎಇ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಐರೋಪ್ಯ ಒಕ್ಕೂಟದ ನಾಯಕರು ಸೆಪ್ಟೆಂಬರ್‌ನಲ್ಲಿ ಜಂಟಿಯಾಗಿ ಘೋಷಿಸಿದ್ದಾರೆ.

ಭಾರತವನ್ನು ಕೊಲ್ಲಿ ಪ್ರದೇಶದೊಂದಿಗೆ ಜೋಡಿಸುವ ಪೂರ್ವ ಕಾರಿಡಾರ್ ಹಾಗೂ ಕೊಲ್ಲಿ ಪ್ರದೇಶವನ್ನು ಯುರೋಪ್ ಜೊತೆಗೆ ಬೆಸೆಯುವ ಉತ್ತರ ಕಾರಿಡಾರ್ ಈ ಯೋಜನೆಯ ಭಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.