ADVERTISEMENT

ಸಿದ್ದರಾಮಯ್ಯನವರೇ, ಬಟಾಟೆಯಿಂದ ಚಿನ್ನ ತೆಗೆಯುವವ ವಿದೂಷಕನಲ್ಲದೆ ಮತ್ತೇನು: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2022, 7:54 IST
Last Updated 14 ಅಕ್ಟೋಬರ್ 2022, 7:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರ ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಹೆಚ್ಚಳ ಮಾಡಿದ್ದೇ ತಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕರಿಗೆ ಬೆವರಿಳಿಯತೊಡಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಮೀಸಲಾತಿ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.

‘ಸಿದ್ದರಾಮಯ್ಯ ಅವರೇ, ತಾವು ಓಟ್‌‌ ಬ್ಯಾಂಕ್ ಆಗಿ ಬಳಸಿದ್ದ ದಲಿತ ಸಮುದಾಯ ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸುತ್ತಿರುವುದು ಸಹಿಸಿಕೊಳ್ಳಲಾಗುತ್ತಿಲ್ಲವೇ’ ಎಂದು ಬಿಜೆಪಿ ಪ್ರಶ್ನಿಸಿದೆ.

ADVERTISEMENT

‘ಅಧಿಕಾರವಿದ್ದಾಗ ಪರಿಶಿಷ್ಟ ವರ್ಗದ ಬೇಡಿಕೆಯನ್ನು ಮನ್ನಿಸದೆ ಕಾಲಹರಣ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಈಗ ಬೊಮ್ಮಾಯಿ ಸರ್ಕಾರ ಮಾಡಿದ ಮೀಸಲಾತಿ ಹೆಚ್ಚಳ ಬಿಸಿತುಪ್ಪವಾಗಿ ಪರಿಣಮಿಸಿದೆ. ಪರಿಶಿಷ್ಟ ವರ್ಗದವರ ಏಳಿಗೆ ಸಹಿಸದ ಕಾಂಗ್ರೆಸ್‌ ಮೀಸಲಾತಿ ಹೆಚ್ಚಳವನ್ನು ವಿರೋಧಿಸುತ್ತಿತ್ತು. ಏಕೆ ಈ ದಲಿತ ವಿರೋಧಿ ಮನೋಸ್ಥಿತಿ’ ಎಂದು ಬಿಜೆಪಿ ಕುಟುಕಿದೆ.

‘ದಶಕಗಳಿಂದ ವಿದೂಷಕನಾಗಿ ದೇಶದ ಜನರನ್ನು ‘ಅಪ್ರಬುದ್ಧ ಬಾಲಕ’ನಗಿಸುತ್ತಿದ್ದಾನೆ. ಸಿದ್ದರಾಮಯ್ಯನವರೇ, ಬಟಾಟೆಯಿಂದ ಚಿನ್ನ ತೆಗೆಯುವವ ವಿದೂಷಕನಲ್ಲದೆ ಮತ್ತೇನು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

’ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಯ ಎನ್ನುವುದು ಇರುತ್ತಿದ್ದರೆ, ಆರ್ಟಿಕಲ್ 370 ರದ್ದತಿ, ಸಿಎಎ ಕಾನೂನು, ರಾಮಮಂದಿರ ನಿರ್ಮಾಣ, ತ್ರಿವಳಿ ತಲಾಖ್ ರದ್ದತಿ, ಸರ್ಜಿಕಲ್ ಸ್ಟ್ರೈಕ್ ಸಾಧ್ಯವಾಗುತ್ತಿರಲಿಲ್ಲ. ಸಿದ್ದರಾಮಯ್ಯ ಅವರೇ, ಇವೆಲ್ಲವನ್ನೂ ವಿರೋಧಿಸಿದ ದೇಶದೊಳಗಿನ ದ್ರೋಹಿಗಳಿಂದ ನಮಗೆ ಭಯ ಕಾಡುತ್ತಿರುವುದು ನಿಜ‌’ ಎಂದು ಬಿಜೆಪಿ ಕಿಚಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.