ADVERTISEMENT

ಇಸ್ರೇಲ್‌ ದಾಳಿ: ಲೆಬನಾನ್‌ನಲ್ಲಿ ಎಂಟು ಮಂದಿ ಸಾವು

ಲೆಬನಾನ್‌ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜನರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 16:07 IST
Last Updated 31 ಅಕ್ಟೋಬರ್ 2024, 16:07 IST
ಲೆಬನಾನ್‌ನ ದಕ್ಷಿಣ ಭಾಗದಲ್ಲಿರುವ ಅಲ್‌–ಹೋಶ್‌ ಪ್ರದೇಶದ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿತು –ಎಎಫ್‌ಪಿ ಚಿತ್ರ
ಲೆಬನಾನ್‌ನ ದಕ್ಷಿಣ ಭಾಗದಲ್ಲಿರುವ ಅಲ್‌–ಹೋಶ್‌ ಪ್ರದೇಶದ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿತು –ಎಎಫ್‌ಪಿ ಚಿತ್ರ   

ಎಪಿ

ಜೆರುಸೆಲೇಂ : ಲೆಬನಾನ್‌ನ ದಕ್ಷಿಣ ಭಾಗದ ಪ್ರದೇಶಗಳ ಮೇಲೆ ಇಸ್ರೇಲ್‌ ತನ್ನ ವಾಯುದಾಳಿಯನ್ನು ತೀವ್ರಗೊಳಿಸಿದ್ದು, ಈ ಪ್ರದೇಶಗಳಿಂದ ತೆರಳುವಂತೆ ಲೆಬನಾನ್‌ನ ಜನರಿಗೆ ಸೇನೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

ಇಸ್ರೇಲ್‌ ಸೇನೆಯ ದಾಳಿಗೆ ಗುರುವಾರ ಲೆಬನಾನ್‌ನ ಎಂಟು ಮಂದಿ ಸಾವಿಗೀಡಾಗಿದ್ದಾರೆ.

ADVERTISEMENT

ಮುಂದುವರಿದ ಕಾರ್ಯಾಚರಣೆ: ಆಕ್ರಮಿತ ವೆಸ್ಟ್‌ ಬ್ಯಾಂಕ್‌ನಲ್ಲಿ ನಡೆಸಿ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ‘ಇಸ್ರೇಲ್‌ನ ವಾಯುದಾಳಿಯಿಂದಾಗಿ ಇಬ್ಬರು ಮೃತಪಟ್ಟಿದ್ದರೆ, ಗುಂಡಿನ ದಾಳಿಗೆ ಒಬ್ಬರು ಮೃತಪಟ್ಟಿದ್ದಾರೆ’ ಎಂದು ಪ್ಯಾಲೆಸ್ಟೇನ್‌ನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ನೂರ್‌ ಶಾಮ್ಸ್‌ ಪ್ರದೇಶದಲ್ಲಿರುವ ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್‌ ಇದೇ ತಿಂಗಳಲ್ಲಿ ಪದೇ ಪದೇ ದಾಳಿ ನಡೆಸಿದೆ.

‘ಈ ಶಿಬಿರದಲ್ಲಿ ಹಮಾಸ್‌ ಬಂಡುಕೋರರು ಉಳಿದುಕೊಂಡಿದ್ದಾರೆ’ ಎಂದು ಇಸ್ರೇಲ್‌ ವಾದಿಸುತ್ತಿದೆ. ಜೊತೆಗೆ, ಇಸ್ರೇಲ್‌ ಮೇಲೆ ದಾಳಿಗೆ ಸಂಚು ರೂಪಿಸಿದ್ದ ತಂಡದ ಭಾಗವಾಗಿದ್ದ ಓರ್ವ ಬಂಡುಕೋರ ಕೂಡ ಇದೇ ಶಿಬಿರದಲ್ಲಿ ತಂಗಿದ್ದ. ಆತನನ್ನೂ ಹತ್ಯೆ ಮಾಡಿರುವುದಾಗಿಯೂ ಇಸ್ರೇಲ್‌ ಹೇಳಿದೆ. 

‘ನಮ್ಮ ಗುಪ್ತಚರ ಕೇಂದ್ರಗಳಲ್ಲಿ ಇರಾನ್‌ನ ಪರವಾಗಿ ಮಾಹಿತಿ ಸಂಗ್ರಹಿಸುತ್ತಿದ್ದ ಕೆಲವರನ್ನು ಬಂಧಿಸಿದ್ದೇವೆ’ ಎಂದು ಇಸ್ರೇಲ್‌ ಪೊಲೀಸರು ತಿಳಿಸಿದ್ದಾರೆ. ಲೆಬನಾನ್‌ ಹಾಗೂ ಇಸ್ರೇಲ್‌ ನಡುವೆ ಕದನ ವಿರಾಮ ಒಪ್ಪಂದಕ್ಕೆ ಬರುವ ಕುರಿತು ಮಾತುಕತೆ ನಡೆಸಬೇಕು ಎಂಬ ಮಾತು ಹೆಚ್ಚು ಕೇಳಿಬರುತ್ತಿದ್ದರೂ ಇಸ್ರೇಲ್‌ ತನ್ನ ದಾಳಿ ಮುಂದುವರಿಸಿದೆ. ‘ಇಸ್ರೇಲ್‌ ತಮ್ಮ ಆಗ್ರಹಗಳಿಗೆ ಒಪ್ಪಿಕೊಳ್ಳದ ಹೊರತು ತಮ್ಮ ಹೋರಾಟ ಮುಂದುವರಿಯುತ್ತದೆ’ ಎಂದು ಹಿಜ್ಬುಲ್ಲಾದ ನೂತನ ನಾಯಕ ನಯೀಮ್‌ ಖಾಸೆಮ್‌ ಕೂಡ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.