ಇಸ್ಲಮಾಬಾದ್: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ಪ್ರತಿನಿಧಿಯಾಗಿ ಡಾ.ಮಲೀಹಾ ಲೋಧಿ ಸ್ಥಾನಕ್ಕೆ ಮುನಿರ್ ಅಕ್ರಂ ಅವರನ್ನು ನೇಮಕ ಮಾಡಲಾಗಿದೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಪ್ರಮುಖ ನೇಮಕಾತಿಗಳನ್ನು ಮಾಡಿರುವ ಅಧಿಸೂಚನೆ ಹೊರಬಂದಿರುವುದಾಗಿ ದಿ ನ್ಯೂಸ್.ಕಾಮ್ ವರದಿ ಮಾಡಿದೆ.
ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಇಮ್ರಾನ್ ಖಾನ್ ಭಾಷಣ ಮಾಡಿ ಕಾಶ್ಮೀರದ ವಿಚಾರ ಹಾಗೂ ಭಯೋತ್ಪಾದನೆ ಕಾರಣ ವಿಷಯಗಳನ್ನು ಪ್ರಸ್ತಾಪಿಸಿ ಜಗತ್ತಿನ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದರು. ಅವರ ಭಾಷಣವನ್ನು ಹಗೆತನದಿಂದ ಕೂಡಿದ ಮಾತು ಎಂದು ಭಾರತ ಪ್ರತಿಕ್ರಿಯಿಸಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಹೊಸ ನೇಮಕಾತಿ ಅಧಿಸೂಚನೆ ಹೊರಬಂದಿದೆ.
ಮುನಿರ್ ಅಕ್ರಂ 2002 ರಿಂದ 2008ರ ವರೆಗೂವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು. ಈಗ ಮತ್ತೆ ನ್ಯೂಯಾರ್ಕ್ನ ವಿಶ್ವಸಂಸ್ಥೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.ಡಾ.ಮಲೀಹಾ ಲೋಧಿ ಸಹ ಸೇವೆಯಿಂದ ಹೊರಬರುತ್ತಿರುವ ಕುರಿತು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಟೀಕಿಸುವ ಭರದಲ್ಲಿ ಕಾಶ್ಮೀರದಲ್ಲಿ ನಡೆದಿರುವ ಘಟನೆ ಎಂದು ಬೇರೊಂದು ದೇಶದಲ್ಲಿನ ಘಟನೆಯ ಚಿತ್ರ ಪ್ರದರ್ಶಿಸಿದ್ದರು. ಸುಳ್ಳು ಸುದ್ದಿಯನ್ನು ಹರಡಿದ್ದರ ಪರಿಣಾಮ ವಿಶ್ವವೇದಿಕೆಯಲ್ಲಿ ಪಾಕಿಸ್ತಾನ ತೀವ್ರ ಮುಜುಗರ ಅನುಭವಿಸಿತ್ತು.
ಜಿನೇವಾದ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ಪ್ರತಿನಿಧಿಯಾಗಿ ಖಲೀಲ್ ಅಹ್ಮದ್ ಹಶ್ಮಿ, ಹಂಗೇರಿಯಲ್ಲಿ ಪಾಕಿಸ್ತಾನದ ಪ್ರತಿನಿಧಿಯಾಗಿ ಮುಹಮ್ಮದ್ ಅಜಾಝ್,...ಹೀಗೆ ಓಮನ್, ಕುವೈತ್, ಶ್ರೀಲಂಕಾ ದೇಶಗಳಿಗೆ ಹೊಸ ಪ್ರತಿನಿಧಿಗಳನ್ನು ನೇಮಕ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.