ADVERTISEMENT

ಮ್ಯಾನ್ಮಾರ್‌ನ ಹರಳಿನ ಗಣಿ ದುರಂತಕ್ಕೆ ನಿರುದ್ಯೋಗ ಸಮಸ್ಯೆ ಕಾರಣ: ಸೂಕಿ

166 ಮಂದಿಯ ಸಾವು ಖಚಿತಪಡಿಸಿದ ಅಗ್ನಿಶಾಮಕ ದಳ

ಏಜೆನ್ಸೀಸ್
Published 3 ಜುಲೈ 2020, 13:47 IST
Last Updated 3 ಜುಲೈ 2020, 13:47 IST
ಅಂಗ್‌ಸಾನ್‌ ಸೂಕಿ
ಅಂಗ್‌ಸಾನ್‌ ಸೂಕಿ   

ಪೆಕೆಂಟ್‌(ಮ್ಯಾನ್ಮಾರ್‌): ದೇಶದ ಉತ್ತರ ಭಾಗದ ಪಚ್ಚೆ ಹರಳಿನ ಗಣಿಯಲ್ಲಿ ಗುರುವಾರ ಸಂಭವಿಸಿದ ಭೂಕುಸಿತ ದುರಂತಕ್ಕೆ ಮ್ಯಾನ್ಮಾರ್‌ ನಾಯಕಿ ಅಂಗ್‌ಸಾನ್‌ ಸೂಕಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. 166 ಜನರ ದಾರುಣ ಸಾವಿಗೆ ಕಾರಣವಾದ ಈ ದುರ್ಘಟನೆಗೆ ನಿರುದ್ಯೋಗ ಸಮಸ್ಯೆ ಕಾರಣ ಎಂದು ಅವರು ದೂರಿದ್ದಾರೆ.

ನಿರ್ಮಾಣ ಉದ್ಯಮದ ಪ್ರತಿನಿಧಿಗಳ ಜೊತೆ ಶುಕ್ರವಾರ ಫೇಸ್‌ಬುಕ್‌ ಲೈವ್‌ನಲ್ಲಿ ಅವರು ಮಾತನಾಡಿದರು. ದುಡಿಮೆಗೆ ಬೇರೆ ದಾರಿಯಿಲ್ಲದ ಕಾರಣ ಜೀವನ ನಿರ್ವಹಣೆಗೆ ಕಾರ್ಮಿಕರು ಅನಿವಾರ್ಯವಾಗಿ ಇಂಥ ಅಪಾಯಕರಾರಿ ಕೆಲಸದಲ್ಲಿ ತೊಡಗುತ್ತಾರೆ ಎಂದು ಸೂಕಿ ಸಹಾನುಭೂತಿ ವ್ಯಕ್ತಪಡಿಸಿದರು.

ಕಾರ್ಮಿಕರು ಕಚಿನ್‌ ಪ್ರಾಂತ್ಯದ ಪೆಕೆಂಟ್‌ನಲ್ಲಿರುವ ದುರಂತ ಸ್ಥಳದ ಬಳಿಯೇ ನೆಲೆಸಿದ್ದರು. ಪರಿತ್ಯಕ್ತ ಗಣಿಯೊಳಗೆ ಕೊರೆಯಲು ಬಳಸಿದ್ದ ಭಾರಿ ಗಾತ್ರದ ಯಂತ್ರಗಳಿಗೆ ಅಂಟಿಕೊಂಡಿದ್ದ ತ್ಯಾಜ್ಯದೊಳಗೆ ಹರಳನ್ನು ಶೋಧಿಸುವ ಕೆಲಸ ಮಾಡುತ್ತಿದ್ದರು. ಅವರುಅಕ್ರಮವಾವಗಿ ಗಣಿಗಿಳಿದಿದ್ದರು.

ADVERTISEMENT

ಮಳೆಗಾಲದ ಕಾರಣ ಮಣ್ಣು ಮೆದುವಾಗಿದ್ದು, ಕಾರ್ಮಿಕರ ಸಾವಿಗೆ ಕಾರಣವಾಯಿತು. ಇಂಥ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಲೇ ಇವೆ.

ಪ್ರಕರಣದಲ್ಲಿ 166 ಮಂದಿ ಅಸುನೀಗಿರುವುದನ್ನು, ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಮ್ಯಾನ್ಮಾರ್‌ನ ಅಗ್ನಿಶಾಮಕ ಇಲಾಖೆ ಖಚಿತಪಡಿಸಿದೆ. 54 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2015ರ ನವೆಂಬರ್‌ನಲ್ಲಿ ನಡೆದಿದ್ದ ಇಂಥ ದುರ್ಘಟನೆಯಲ್ಲಿ 113 ಮಂದಿ ಮೃತಪಟ್ಟಿದ್ದು, ಗುರುವಾರದ ದುರಂತ ಇದುವರೆಗಿನ ಅತಿ ಹೆಚ್ಚು ಸಾವು ನೋವು ಕಂಡ ಪ್ರಕರಣ ಎನಿಸಿದೆ.

ಮ್ಯಾನ್ಮಾರ್‌ನ ಅತಿ ದೊಡ್ಡನಗರ ಯಾಂಗೂನ್‌ನಿಂದ 950 ಕಿ.ಮೀ ದೂರದಲ್ಲಿ (600 ಮೈಲು) ಈ ಹರಳಿನ ಗಣಿಗಳಿವೆ. ವಿಶ್ವದ ಅತ್ಯಂತ ಸಮೃದ್ಧ ಪಚ್ಚೆ ಹರಳಿನ ಉದ್ಯಮ ಇಲ್ಲಿದೆ.

‘ಸತ್ತವರಲ್ಲಿ ಹೆಚ್ಚಿನವರು ಹೊಟ್ಟೆಪಾಡಿಗಾಗಿ ಅಕ್ರಮವಾಗಿ ಇಂಥ ಕೆಲಸಕ್ಕೆ ಇಳಿಯುತ್ತಿದ್ದ ಕಾರ್ಮಿಕರು. ಇದು ದೇಶದಲ್ಲಿ ನಿರುದ್ಯೋಗದ ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ. ಉದ್ಯೋಗ ಸೃಷ್ಟಿ ಆದ್ಯತೆಯ ವಿಷಯವಾಗಬೇಕಾಗಿದೆ’ ಎಂದು ಸೂಕಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.