ADVERTISEMENT

ನೇಪಾಳ: ಒಲಿ ಭವಿಷ್ಯ ನಿರ್ಧರಿಸುವ ಸಭೆ ಮತ್ತೆ ಮುಂದಕ್ಕೆ

ಪಿಟಿಐ
Published 8 ಜುಲೈ 2020, 7:31 IST
Last Updated 8 ಜುಲೈ 2020, 7:31 IST
ಕೆ.ಪಿ. ಒಲಿ
ಕೆ.ಪಿ. ಒಲಿ   

ಕಠ್ಮಂಡು: ನೇಪಾಳ ಕಮ್ಯುನಿಸ್ಟ್‌ ಪಕ್ಷದ ಅತ್ಯಂತ ಮಹತ್ವದ್ದು ಎನ್ನಲಾಗಿದ್ದ ಸಭೆಯನ್ನು ಬುಧವಾರ ಮತ್ತೊಮ್ಮೆ ಮುಂದೂಡಲಾಗಿದೆ. ಈ ಹಿಂದೆಯೂ ಮೂರು ಬಾರಿ ಸಭೆಯನ್ನು ಮುಂದೂಡಲಾಗಿತ್ತು. ಸಭೆಯಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗಿತ್ತು.

ಒಲಿ ಅವರು ಇತ್ತೀಚೆಗೆ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ ನಂತರ, ಅವರ ವಿರುದ್ಧ ಪಕ್ಷದೊಳಗೆ ಬಂಡಾಯ ಸೃಷ್ಟಿಯಾಗಿ, ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಹೆಚ್ಚಿದೆ. ಈ ಕುರಿತ ತೀರ್ಮಾನಗಳನ್ನು ಕೈಗೊಳ್ಳುವ ಸಲುವಾಗಿ ಕಮ್ಯುನಿಸ್ಟ್‌ ಪಕ್ಷದ 45 ಸದಸ್ಯರನ್ನೊಳಗೊಂಡ ಉನ್ನತಮಟ್ಟದ ಸ್ಥಾಯಿ ಸಮಿತಿಯ ಸಭೆಯನ್ನು ಬುಧವಾರ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ‘ಸಭೆಯನ್ನು ಶುಕ್ರವಾರದವರೆಗೆ ಮುಂದೂಡಲಾಗಿದೆ’ ಎಂದು ಪ್ರಧಾನಿ ಒಲಿ ಅವರ ಮಾಧ್ಯಮ ಸಲಹೆಗಾರ ಸೂರ್ಯ ಥಾಪ ತಿಳಿಸಿದ್ದಾರೆ.

‘ಒಲಿ ಅವರು ಭಾರತವನ್ನು ಕುರಿತು ನೀಡಿದ ಈಚಿನ ಹೇಳಿಕೆಗಳು ರಾಜಕೀಯವಾಗಿ ಸರಿಯಾದವುಗಳಲ್ಲ ಅಷ್ಟೇ ಅಲ್ಲ ರಾಜತಾಂತ್ರಿಕವಾಗಿ ಸೂಕ್ತವೆನ್ನಿಸುವಂಥವುಗಳೂ ಅಲ್ಲ’ ಎಂದು ಆಕ್ಷೇಪಿಸಿದ್ದ ಅವರದ್ದೇ ಪಕ್ಷದ ನಾಯಕ, ಮಾಜಿ ಪ್ರಧಾನಿ ಪುಷ್ಪಕಮಲ್‌ ದಹಲ್‌ ‘ಪ್ರಚಂಡ’ ಅವರು, ಒಲಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು.

ADVERTISEMENT

ನೇಪಾಳದ ಕಮ್ಯುನಿಸ್ಟ್ ಪಕ್ಷವು ಎರಡು ಬಣಗಳಾಗಿ ಒಡೆದಿದ್ದು, ಒಂದರ ನೇತೃತ್ವವನ್ನು ಒಲಿ ವಹಿಸಿದ್ದರೆ ಇನ್ನೊಂದು ಬಣದ ನಾಯಕತ್ವವನ್ನು ಪ್ರಚಂಡ ಅವರು ವಹಿಸಿದ್ದಾರೆ. ಕೆಲವು ದಿನಗಳ ಹಿಂದೆ ಈ ಎರಡೂ ಬಣಗಳು ಅಧಿಕಾರ ಹಂಚಿಕೆಯ ಬಗ್ಗೆ ಒಂದು ಒಪ್ಪಂದಕ್ಕೆ ಬಂದಿದ್ದವು. ಆದರೆ ಪ್ರಧಾನಿ ಒಲಿ ಅವರು ಏಕಪಕ್ಷೀಯವಾಗಿ ಬಜೆಟ್‌ ಅಧಿವೇಶನವನ್ನು ಘೋಷಿಸಿದ ನಂತರ ಎರಡು ಬಣಗಳ ಮಧ್ಯೆ ಮತ್ತೆ ಭಿನ್ನಮತ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.