ಕಠ್ಮಂಡು: ನೇಪಾಳದಲ್ಲಿ ‘ಜೆನ್-ಝಿ’ ಗುಂಪು ಸಂಘಟಿಸಿದ್ದ ಪ್ರತಿಭಟನೆಯಲ್ಲಿ ಮೃತಪಟ್ಟ ಕೆಲವರ ಅಂತ್ಯಕ್ರಿಯೆಯನ್ನು ಕಠ್ಮಂಡುವಿನ ಪಶುಪತಿ ಆರ್ಯಘಾಟ್ನಲ್ಲಿ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿಸಲಾಯಿತು.
ಮಹಾರಾಜ್ಗುಂಜ್ನಲ್ಲಿರುವ ತ್ರಿಭುವನ್ ವಿಶ್ವವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ನಾಲ್ವರ ಪಾರ್ಥಿವ ಶರೀರಗಳನ್ನು ಮೆರವಣಿಗೆ ಮೂಲಕ ಪಶುಪತಿಗೆ ಕೊಂಡೊಯ್ಯಲಾಯಿತು. ಆರು ಶವಗಳನ್ನು ವಿವಿಧ ಜಿಲ್ಲೆಗಳಿಗೆ ಕೊಂಡೊಯ್ಯಲಾಯಿತು.
ಪಶುಪತಿ ಆರ್ಯಘಾಟ್ನಲ್ಲಿ ನಡೆದ ಮೃತರ ಅಂತಿಮ ವಿಧಿವಿಧಾನಗಳಲ್ಲಿ ಇಂಧನ ಮತ್ತು ಮೂಲಸೌಕರ್ಯ ಸಚಿವ ಕುಲ್ಮನ್ ಘೀಸಿಂಗ್ ಮತ್ತು ಗೃಹ ಸಚಿವ ಓಂ ಪ್ರಕಾಶ್ ಆರ್ಯಲ್ ಭಾಗವಹಿಸಿದ್ದರು. ಹುತಾತ್ಮರಿಗೆ ಸಾವಿರಾರು ಜನರು ಗೌರವ ಸಲ್ಲಿಸಿದರು.
ಸೆಪ್ಟೆಂಬರ್ 8 ಮತ್ತು 9ರಂದು ನಡೆಸಿದ್ದ ಪ್ರತಿಭಟನೆಯಲ್ಲಿ ಮೃತಪಟ್ಟವರನ್ನು ‘ಹುತಾತ್ಮರು’ ಎಂದು ಪ್ರಧಾನಿ ಸುಶೀಲಾ ಕಾರ್ಕಿ ಭಾನುವಾರ ಘೋಷಿಸಿದ್ದರು.
ಸರ್ಕಾರವು ಮೃತರ ಕುಟುಂಬಸ್ಥರಿಗೆ ತಲಾ 15 ಲಕ್ಷ ನೇಪಾಳಿ ರೂಪಾಯಿ (₹9.37 ಲಕ್ಷ) ಪರಿಹಾರ ಘೋಷಿಸಿದೆ. ಮೃತರ ಸಾವಿಗೆ ಶೋಕ ವ್ಯಕ್ತಪಡಿಸಲು ಬುಧವಾರ ಸಾರ್ವಜನಿಕ ರಜೆ ಘೋಷಿಸಿದೆ. ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲು ಸೂಚಿಸಿದೆ.
ಸೆ.8 ಮತ್ತು 9ರಂದು ನಡೆಸಿದ್ದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಮೂವರು ಪೊಲೀಸರು ಮತ್ತು 10 ಕೈದಿಗಳು ಸೇರಿದಂತೆ 72 ಮಂದಿ ಮೃತಪಟ್ಟಿದ್ದರು.
ಪ್ರತಿಭಟನೆಯಲ್ಲಿ ಉಂಟಾದ ಹಾನಿ ಪ್ರಮಾಣವನ್ನು ಲೆಕ್ಕ ಹಾಕಲು ವಿವಿಧ ಸಚಿವಾಲಯಗಳು ಮುಂದಾಗಿವೆ ಎಂದು ಮೈ ರಿಪಬ್ಲಿಕಾ ಸುದ್ದಿ ಪೋರ್ಟಲ್ ಮಂಗಳವಾರ ವರದಿ ಮಾಡಿದೆ.
ಅಂತ್ಯಕ್ರಿಯೆಯಲ್ಲಿ ಕುಲ್ಮನ್ ಘೀಸಿಂಗ್, ಓಂ ಪ್ರಕಾಶ್ ಆರ್ಯಲ್ ಭಾಗಿ ಮೃತರ ಕುಟುಂಬಸ್ಥರಿಗೆ ತಲಾ 15 ಲಕ್ಷ ನೇಪಾಳಿ ರೂಪಾಯಿ ಪರಿಹಾರ ಬುಧವಾರ ಸಾರ್ವಜನಿಕ ರಜೆ ಘೋಷಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.