ಕಾಬೂಲ್: ತಾಲಿಬಾನ್ ಆಡಳಿತದಿಂದ ತಪ್ಪಿಸಿಕೊಂಡು ದೂರಕ್ಕೆ ಪಲಾಯನ ಮಾಡುವ ಉದ್ದೇಶದಿಂದ ಕಾಬೂಲ್ನ ವಿಮಾನ ನಿಲ್ದಾಣದಲ್ಲಿ ಸೇರಿದ್ದ ಸಾವಿರಾರು ಜನರುಗುರುವಾರ ಸಂಭವಿಸಿದ ಭೀಕರ ಸ್ಫೋಟಗಳಿಂದ ತತ್ತರಿಸಿಹೋಗಿದ್ದಾರೆ. ಅವರಲ್ಲಿ ಭೀತಿ ಮನೆಮಾಡಿದೆ.
‘ಸ್ಫೋಟದ ಸದ್ದನ್ನು ಕೇಳಿದಾಗ ಜನರು ಭಾರಿ ದಿಗಿಲಾದರು. ವಿಮಾನ ನಿಲ್ದಾಣದ ಗೇಟ್ನಲ್ಲಿ ಉಂಟಾದ ನೂಕುನುಗ್ಗಲು ತಪ್ಪಿಸಲು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿಹರಿದಾಡುತ್ತಿರುವ ಚಿತ್ರಗಳಲ್ಲಿ ರಕ್ತಸಿಕ್ತ ದೃಶ್ಯಗಳೇ ಕಾಣುತ್ತಿವೆ. ರಕ್ತದಿಂದ ತೋಯ್ದಿರುವ ಬಟ್ಟೆಗಳು, ಗಾಯಾ
ಳುವೊಬ್ಬರ ಮುರಿದ ಕೈಯನ್ನು ಹಿಡಿದು ಆಸ್ಪತ್ರೆಯತ್ತ ಸಾಗುತ್ತಿರುವ ಬಾಲಕನ ದೃಶ್ಯ ಮನಕಲಕುವಂತಿದೆ. ಗಾಯಾಳು ಮಗುವನ್ನು ಎತ್ತಿಕೊಂಡು ಓಡುತ್ತಿರುವ ದೃಶ್ಯ ಹೃದಯವಿದ್ರಾವಕವಾಗಿದೆ. ತುಂಡುತುಂಡು ದೇಹಗಳು, ಮಾಂಸ, ಗಾಯಾಳುಗಳೇ ಸ್ಥಳದಲ್ಲಿ ತುಂಬಿ
ದ್ದರು ಎಂದು ಪ್ರತ್ಯಕ್ಷದರ್ಶಿ ಮಿಲಾದ್ ಎಂಬುವರು ತಿಳಿಸಿದ್ದಾರೆ. ಘಟನೆಯಿಂದ ಗಾಬರಿಗೆ ಬಿದ್ದ ಪ್ರಯಾಣಿಕನೊಬ್ಬ ತನ್ನ ಪತ್ನಿ ಹಾಗೂ ಮಗುವಿನ ಪಾಸ್ಪೋರ್ಟ್ ಮೊದಲಾದ ದಾಖಲೆಗಳನ್ನು ಸ್ಥಳದಲ್ಲೇ ಬಿಟ್ಟು ಹೋದರು.
ತನ್ನ ದೇಶದ ಯಾವುದೇ ನಾಗರಿಕರು ಅಥವಾ ಸೇನಾ ಸಿಬ್ಬಂದಿಗೆ ಸ್ಫೋಟದಿಂದ ತೊಂದರೆಯಾಗಿಲ್ಲ ಎಂದು ಬ್ರಿಟನ್ ಗುರುವಾರ ತಿಳಿಸಿದೆ. ಆದರೆ, ಕಾಬೂಲ್ ವಿಮಾನ ನಿಲ್ದಾಣದ ಬಳಿ ಸ್ಫೋಟ ಸಂಭವಿಸಿದ ಪರಿಣಾಮ ಉಂಟಾದ ಗೊಂದಲ ಸ್ಥಿತಿಗೆ ತಾನು ಹಾಗೂ ತಮ್ಮ ಸಿಬ್ಬಂದಿಸಾಕ್ಷಿಯಾಗಿದ್ದೇವೆ ಎಂದು ಅಫ್ಗಾನಿಸ್ತಾನದಲ್ಲಿ ಪ್ರಾಣಿ ಆಶ್ರಯ ಕೇಂದ್ರ ನಡೆಸುತ್ತಿರುವ ಬ್ರಿಟನ್ನ ರಾಯಲ್ ಮರೀನ್ನ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸ್ಫೋಟಕ್ಕೂ ಮುನ್ನ ಕಾರ್ಯಾಚರಣೆ ಸ್ಥಗಿತ
ಬಾಂಬ್ ಸ್ಫೋಟಕ್ಕೆ ಮುನ್ನ ಕೆಲವು ದೇಶಗಳು ಅಫ್ಗಾನಿಸ್ತಾನದಿಂದ ತೆರವು ಕಾರ್ಯಚರಣೆಯನ್ನು ಸ್ಥಗಿತಗೊಳಿಸಿದ್ದವು. ಬೆಲ್ಜಿಯಂ, ಕೆನಡಾ, ಡೆನ್ಮಾರ್ಕ್, ಜರ್ಮನಿ ಮತ್ತು ನೆದರ್ಲ್ಯಾಂಡ್ಸ್ ದೇಶಗಳು ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇನ್ನು ಮುಂದೆ ತೆರವು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದವು. ಆದರೆ ಕಾರ್ಯಾಚರಣೆ ಮುಂದುವರಿಸುವುದಾಗಿ ಅಮೆರಿಕ ತಿಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.