ADVERTISEMENT

ಪ್ರವಾಹಕ್ಕೆ ಭಾರತದ ಸಹಾನುಭೂತಿ ಸಂಬಂಧ ವೃದ್ಧಿಗೆ ನೆರವಾಗುವುದಿಲ್ಲ: ಪಾಕ್

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 17:42 IST
Last Updated 31 ಆಗಸ್ಟ್ 2022, 17:42 IST
   

ಇಸ್ಲಾಮಾಬಾದ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದೇಶಕ್ಕೆ ಒದಗಿರುವ ಪ್ರವಾಹದ ಬಗ್ಗೆ ಸಹಾನುಭೂತಿಯ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. ಆದರೆ, ಈ ವಿಪತ್ತಿಗೆ ಭಾರತ ತೋರುತ್ತಿರುವ ಸಹಾನುಭೂತಿಯಿಂದ ಉಭಯ ರಾಷ್ಟ್ರಗಳ ಸಂಬಂಧ ಸುಧಾರಿಸಬಹುದು ಎಂದು ನಿರೀಕ್ಷಿಸುವುದಿಲ್ಲಎಂದು ಪಾಕ್ ವಿದೇಶಾಂಗ ವ್ಯವಹಾರಗಳ ವಕ್ತಾರಹೇಳಿದ್ದಾರೆ.

ಉಭಯ ದೇಶಗಳ ನಡುವೆ ಉತ್ತಮ ಸಂಬಂಧಕ್ಕಾಗಿ ಕಾಶ್ಮೀರದಂತಹ ಸಮಸ್ಯೆಗಳನ್ನು ಮೊದಲು ಪರಿಹರಿಸಬೇಕು ಮತ್ತು ಸಹಾನುಭೂತಿಯ ಸಂದೇಶಗಳು ಈ ಸಂದರ್ಭದಲ್ಲಿ ಕೆಲಸ ಮಾಡುವುದಿಲ್ಲ ಎಂದು ಪಾಕ್ ವಿದೇಶಾಂಗ ವ್ಯವಹಾರಗಳ ವಕ್ತಾರ ಅಸಿಮ್ ಇಫ್ತಿಕಾರ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿನ ಪ್ರವಾಹದ ಕುರಿತು ಇಸ್ಲಾಮಾಬಾದ್‌ನಿಂದ ವಿಡಿಯೊ ಸಂವಾದದ ಮೂಲಕ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡುತ್ತಿದ್ದ ಸಂದರ್ಭ,ನೀವು ಭಾರತದಿಂದ ಹೆಚ್ಚಿನ ಸಹಾಯವನ್ನು ನಿರೀಕ್ಷಿಸುತ್ತೀರಾ ಮತ್ತು ಈ ರೀತಿಯ ವಿಪತ್ತು ಉಭಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸಬಹುದೇ ಎಂದು ಇಫ್ತಿಕಾರ್ ಅವರಿಗೆಪ್ರಶ್ನೆ ಕೇಳಲಾಯಿತು.

ADVERTISEMENT

ಮೋದಿಯವರ ಟ್ವೀಟ್‌ನಲ್ಲಿನ ಹೇಳಿಕೆಯನ್ನು ನೀವು ನೋಡಿದ್ದೀರಿ ಎಂದು ನಾನು ಭಾವಿಸುತ್ತೇನೆ.ಆದರೆ, ಇದು ಸಂಕಷ್ಟದ ಪರಿಸ್ಥಿತಿ ಮತ್ತು ಪ್ರವಾಹ ನೈಸರ್ಗಿಕ ಪ್ರಕ್ರಿಯೆ. ಸಂಕಷ್ಟದಲ್ಲಿರುವ ಜನ ಬೇರೆ ಯಾವುದೇ ವಿಚಾರಗಳ ಬಗ್ಗೆ ಈ ಸಂದರ್ಭ ಯೋಚಿಸುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಇಫ್ತಿಕಾರ್ ಹೇಳಿದ್ದಾರೆ.

'ಪಾಕಿಸ್ತಾನದ ಪ್ರವಾಹದಿಂದ ಉಂಟಾದ ವಿನಾಶವನ್ನು ನೋಡಿ ನನಗೆ ದುಃಖವಾಗಿದೆ. ಈ ನೈಸರ್ಗಿಕ ವಿಕೋಪದಿಂದ ಸಂತ್ರಸ್ತಕುಟುಂಬಗಳು, ಗಾಯಾಳುಗಳು ಮತ್ತು ಸಂತ್ರಸ್ತರೆಲ್ಲರಿಗೂ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಪಾಕಿಸ್ತಾನ ಶೀಘ್ರ ಸಹಜ ಸ್ಥಿತಿಗೆ ಮರಳುವ ವಿಶ್ವಾಸಇದೆ' ಎಂದು ಮೋದಿ ಟ್ವೀಟ್ ಮಾಡಿದ್ದರು.

ಎರಡು ದೇಶಗಳ ನಡುವೆ ಕಾಶ್ಮೀರದ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಮಸ್ಯೆಇದೆ. ಅದನ್ನು ಪರಿಹರಿಸದ ಹೊರತು ಸಂಬಂಧ ವೃದ್ಧಿ ಸಾಧ್ಯವಿಲ್ಲ ಎಂದು ಇಫ್ತಿಕಾರ್ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.