ADVERTISEMENT

ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ‌: ಭಾರತ ಪ್ರತಿಪಾದನೆ

ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ: ಮಾನವ ಹಕ್ಕುಗಳ ಪರಿಷತ್‌ ಅಧಿವೇಶನದಲ್ಲಿ ಪ್ರಸ್ತಾಪ

ಪಿಟಿಐ
Published 16 ಸೆಪ್ಟೆಂಬರ್ 2020, 10:07 IST
Last Updated 16 ಸೆಪ್ಟೆಂಬರ್ 2020, 10:07 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಜಿನಿವಾ: ‘ಭಯೋತ್ಪಾದನೆಯ ಕೇಂದ್ರ ಬಿಂದುವೇ ಪಾಕಿಸ್ತಾನ. ಜತೆಗೆ, ಹಿಂದೂಗಳು, ಸಿಖ್ಖರು ಮತ್ತು ಕ್ರೈಸ್ತರು ಹಾಗೂ ಇತರ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಿರುವ ಪಾಕಿಸ್ತಾನದಿಂದ ಮಾನವ ಹಕ್ಕುಗಳ ಬಗ್ಗೆ ಪಾಠ ಕಲಿಯಬೇಕಾಗಿಲ್ಲ’ ಎಂದು ಭಾರತ ಕಟುವಾಗಿ ಹೇಳಿದೆ.

ಇಲ್ಲಿ ನಡೆದ 45ನೇ ಮಾನವ ಹಕ್ಕುಗಳ ಪರಿಷತ್‌ (ಎಚ್‌ಆರ್‌ಸಿ) ಅಧಿವೇಶನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಪಾಕಿಸ್ತಾನದ ಹೇಳಿಕೆಗೆ ಭಾರತ ಈ ಪ್ರತಿಕ್ರಿಯೆ ನೀಡಿದೆ.

‘ವಿಶ್ವಸಂಸ್ಥೆ ನಿರ್ಬಂಧಿಸಿದ ವ್ಯಕ್ತಿಗಳಿಗೆ ಪಾಕಿಸ್ತಾನ ಸರ್ಕಾರ ಪಿಂಚಣಿ ನೀಡುತ್ತಿದೆ. ಜತೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಾವಿರಾರು ಮಂದಿ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿರುವಾಗಿ ಅಲ್ಲಿನ ಪ್ರಧಾನಿಯೇ ದ ಒಪ್ಪಿಕೊಂಡಿದ್ದಾರೆ. ಆದರೂ, ಸುಳ್ಳು ಮತ್ತು ತಿರುಚಿದ ಹೇಳಿಕೆಗಳ ಮೂಲಕ ಭಾರತಕ್ಕೆ ಕಳಂಕ ತರುವ ಪ್ರಯತ್ನವನ್ನು ಪಾಕಿಸ್ತಾನ ಮಾಡುತ್ತಿದೆ’ ಎಂದು ಭಾರತ ಹೇಳಿದೆ.

ADVERTISEMENT

‘ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ಒದಗಿಸುವುದನ್ನು ನಿಯಂತ್ರಿಸುವಲ್ಲಿ ಪಾಕಿಸ್ತಾನ ವಿಫಲವಾಗಿರುವುದನ್ನು ಹಲವು ಸಂಸ್ಥೆಗಳು ಅಂತರರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಪ್ರಸ್ತಾಪಿಸಿವೆ. ಆದರೂ, ಪಾಕಿಸ್ತಾನ ಭಯೋತ್ಪಾದನೆ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ವಿಫಲವಾಗಿದೆ’ ಎಂದು ದೂರಿದೆ.

‘ಧರ್ಮನಿಂದನೆ ಕಾನೂನುಗಳು, ಬಲವಂತದ ಮತಾಂತರ, ಹಿಂಸೆ ಮತ್ತು ತಾರತಮ್ಯದ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಲಾಗಿದೆ. ಸಾವಿರಾರು ಸಿಖ್ಖರು, ಹಿಂದೂಗಳು ಮತ್ತು ಕ್ರೈಸ್ತ ಮಹಿಳೆಯರು ಮತ್ತು ಬಾಲಕಿಯರನ್ನು ಅಪಹರಿಸಿ ಬಲವಂತದ ವಿವಾಹ ಮಾಡಲಾಗಿದೆ. ಜತೆಗೆ ಅವರನ್ನು ಮತಾಂತರ ಮಾಡಲಾಗಿದೆ’ ಎಂದು ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.