ಲಾಹೋರ್: ‘ಆಡಳಿತಾರೂಢ ಪಾಕಿಸ್ತಾನ ತೆಹ್ರೀಕ್–ಐ–ಇನ್ಸಾಫ್ (ಪಿಟಿಐ) ಪಕ್ಷ ವಿದೇಶಿ ದೇಣಿಗೆ ಸಂಗ್ರಹಿಸುವಲ್ಲಿ ಮಾಡಿರುವ ವಂಚನೆ ಪತ್ತೆಯಾಗಿದೆ. ಈ ಮೂಲಕ ಪ್ರಧಾನಿ ಇಮ್ರಾನ್ ಖಾನ್ ಒಬ್ಬ ಭ್ರಷ್ಟ ಹಾಗೂ ವಂಚಕ ಎಂಬುದು ಜಗಜ್ಜಾಹೀರಾಗಿದೆ’ ಎಂದು ಪದಚ್ಯುತಗೊಂಡಿರುವ ಪ್ರಧಾನಿ ನವಾಜ್ ಶರೀಫ್ ಟೀಕಿಸಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್–ನವಾಜ್ (ಪಿಎಂಎಲ್–ಎನ್) ಪಕ್ಷದ ವರಿಷ್ಠರೂ ಆಗಿರುವ ಶರೀಫ್ ಈ ಕುರಿತು ಟ್ವೀಟ್ ಮಾಡಿದ್ದಾರೆ.
‘ಮಿಸ್ಟರ್ ಕ್ಲೀನ್ ಒಬ್ಬ ಭ್ರಷ್ಟ ಹಾಗೂ ಅಪ್ರಾಮಾಣಿಕ ರಾಜಕೀಯ ವಂಚಕ ಎಂಬುದು ಕೊನೆಗೂ ಬಹಿರಂಗವಾಗಿದೆ. ದೇವರಿಂದ ನ್ಯಾಯ ಸಿಕ್ಕಿದೆ. ಈಗ ನ್ಯಾಯಾಲಯ ತನ್ನ ತೀರ್ಪು ನೀಡಬೇಕಷ್ಟೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ವಿದೇಶಿ ಪ್ರಜೆಗಳು ಹಾಗೂ ಸಂಸ್ಥೆಗಳಿಂದ ಪಿಟಿಐ ಪಕ್ಷ ಕೋಟ್ಯಂತರ ರೂಪಾಯಿ ದೇಣಿಗೆ ಪಡೆದಿದೆ. 2009–10ರಿಂದ 2012–13ನೇ ಸಾಲಿನ ವರೆಗಿನ ದೇಣಿಗೆ ವಿವರಗಳನ್ನು ಮುಚ್ಚಿಟ್ಟಿದೆ ಎಂದು ಚುನಾವಣಾ ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ನವಾಜ್ ಶರೀಫ್ ಅವರು ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.