ADVERTISEMENT

ನೇಪಾಳವಿಲ್ಲದೆ ನಮ್ಮ ರಾಮನೂ ಪರಿಪೂರ್ಣನಲ್ಲ: ಬುದ್ಧ ಜನ್ಮಸ್ಥಳದಲ್ಲಿ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮೇ 2022, 10:55 IST
Last Updated 16 ಮೇ 2022, 10:55 IST
ನೇಪಾಳದ ಲುಂಬಿನಿಯಲ್ಲಿ ಪ್ರಧಾನಿ ಮೋದಿ (ಪಿಟಿಐ ಚಿತ್ರ)
ನೇಪಾಳದ ಲುಂಬಿನಿಯಲ್ಲಿ ಪ್ರಧಾನಿ ಮೋದಿ (ಪಿಟಿಐ ಚಿತ್ರ)   

ಲುಂಬಿನಿ (ನೇಪಾಳ):ನೇಪಾಳ ಇಲ್ಲದೆ ನಮ್ಮ ರಾಮ ಕೂಡ ಪರಿಪೂರ್ಣನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿರುವುದಕ್ಕೆ ನೇಪಾಳದ ಪ್ರಜೆಗಳು ನಮ್ಮ ಬಗ್ಗೆ ಸಂತುಷ್ಟರಾಗಿದ್ದಾರೆ ಎಂಬುದು ನಮಗೆ ತಿಳಿದಿದೆ. ಪ್ರಪಂಚದ ಅನೇಕ ಪವಿತ್ರ ಸ್ಥಳಗಳಿಗೆ ನೇಪಾಳವು ನೆಲೆಯಾಗಿದೆ’ ಎಂದು ಹೇಳಿದರು.

ಪ್ರೀತಿ ಮತ್ತು ಅಧ್ಯಾತ್ಮಿಕತೆ ನಮ್ಮ ಅತಿದೊಡ್ಡ ಭಂಡಾರ. ಗೌತಮ ಬುದ್ಧನ ಸಂದೇಶವನ್ನು ಸಾರುವುದಕ್ಕಾಗಿ ಭಾರತ ಹಾಗೂ ನೇಪಾಳ ಈ ಭಂಡಾರವನ್ನು ಇನ್ನಷ್ಟು ಬಲಪಡಿಸಬೇಕಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

ADVERTISEMENT

‘ಬುದ್ಧ ದೊಡ್ಡ ರಾಜ್ಯವನ್ನು ಹಾಗೂ ಎಲ್ಲ ಸವಲತ್ತುಗಳನ್ನು ತ್ಯಾಗ ಮಾಡಿದ್ದರು. ಸಾಮಾನ್ಯ ಶಿಶುವಾಗಿ ಬುದ್ಧ ಜನಿಸಿರಲಿಲ್ಲ. ತ್ಯಾಗ ಎಷ್ಟು ಮಹತ್ವದ್ದು ಎಂಬುದನ್ನು ನಾವು ಅರಿಯುವಂತೆ ಮಾಡಿದ ಮಹಾನ್ ವ್ಯಕ್ತಿ ಬುದ್ಧ. ಅವರು ಕಾಡುಗಳಲ್ಲಿ ನಡೆದರು, ಧ್ಯಾನ ಮಾಡಿದರು, ಆತ್ಮಾವಲೋಕನ ಮಾಡಿದರು, ಜ್ಞಾನ ಪಡೆದರು. ಆ ಬಳಿಕವೂ ತಾವು ಜನರ ರಕ್ಷಕನೆಂದು ಹೇಳಿಕೊಳ್ಳಲಿಲ್ಲ. ತಮ್ಮದೇ ಆದ ದಾರಿಯನ್ನು ಜಗತ್ತಿಗೆ ತೋರಿದರು’ ಎಂದು ಪ್ರಧಾನಿ ಹೇಳಿದರು.

ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ಲುಂಬಿನಿಗೆ ಭೇಟಿ ನೀಡಿದ್ದು, ಅದಕ್ಕೂ ಮುನ್ನ ಮಾಯಾ ದೇವಿ ದೇಗುಲಕ್ಕೆ ಭೇಟಿ ನೀಡಿ ಬುದ್ಧನ ಜನ್ಮದ ಗುರುತು ಕಲ್ಲಿಗೆ ಗೌರವ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.