ADVERTISEMENT

ಸ್ಕಾಟ್ಲೆಂಡ್‌ನಲ್ಲಿ ರಸ್ತೆ ಅಪಘಾತ: ಬೆಂಗಳೂರು ವಿದ್ಯಾರ್ಥಿ ಸೇರಿ 3 ಭಾರತೀಯರ ಸಾವು

ಪಿಟಿಐ
Published 23 ಆಗಸ್ಟ್ 2022, 13:21 IST
Last Updated 23 ಆಗಸ್ಟ್ 2022, 13:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್: ಸ್ಕಾಟ್ಲೆಂಡ್‌ನ ‘ಎ828 ಹೆದ್ದಾರಿ’ಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಂಗಳೂರು ಮೂಲದ ಗಿರೀಶ್‌ ಸುಬ್ರಹ್ಮಣ್ಯಂ (23) ಎಂಬುವವರು ಸೇರಿ ಮೂವರು ಭಾರತೀಯರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೈದರಾಬಾದ್‌ನ ಪವನ್‌ ಬಾಶೆಟ್ಟಿ (23), ಆಂಧ್ರಪ್ರದೇಶದ ನೆಲ್ಲೂರಿನ ಸುಧಾಕರ್ ಮೋದೆಪಲ್ಲಿ (30) ಎಂಬುವವರೂ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೈದರಾಬಾದ್‌ನ ಸಾಯಿ ವರ್ಮಾ (24) ಎಂಬ ವಿದ್ಯಾರ್ಥಿ ಗಾಯಗೊಂಡಿದ್ದು, ಗ್ಲಾಸ್ಗೊದ ಕ್ವೀನ್‌ ಎಲಿಜಬೆತ್ ಯುನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ.

ಗಿರೀಶ್‌ ಹಾಗೂ ಪವನ್ ಅವರು ಲೀಸೆಸ್ಟರ್ ವಿಶ್ವವಿದ್ಯಾಲಯದಲ್ಲಿ ಏರೊನಾಟಿಕಲ್ ಎಂಜಿನಿಯರಿಂಗ್‌ನ ಸ್ನಾತಕೋತ್ತರ ವಿದ್ಯಾರ್ಥಿಗಳಾಗಿದ್ದರು. ಸುಧಾಕರ್ ಮೋದೆಪಲ್ಲಿ ಇದೇ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ.ಸಾಯಿ ವರ್ಮಾ ಇದೇ ವಿಶ್ವವಿದ್ಯಾಲಯದ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ.

ADVERTISEMENT

ಕಳೆದ ಶುಕ್ರವಾರ, ಈ ನಾಲ್ವರು ಭಾರತೀಯರಿದ್ದ ಕಾರು ಹಾಗೂ ಭಾರಿ ಸರಕು ವಾಹನ (ಎಚ್‌ಜಿವಿ) ನಡುವೆ ಈ ಅಪಘಾತ ಸಂಭವಿಸಿದೆ. ಘಟನೆ ಕುರಿತು ತನಿಖೆ ಕೈಗೊಂಡಿದ್ದು, ಪೂರಕ ಮಾಹಿತಿ ನೀಡುವಂತೆ ಸ್ಕಾಟ್ಲೆಂಡ್‌ ಪೊಲೀಸ್ ಅಧಿಕಾರಿ ಕೆವಿನ್ ಕ್ರೇಗ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.