ಕೊಲಂಬೊ: ದೇಶವು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವುದಕ್ಕೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಾಯಿಸಿ ಸರ್ಕಾರದ ವಿರುದ್ಧ ಜನತೆ ನಡೆಸುತ್ತಿರುವ ಪ್ರತಿಭಟನೆ ಶನಿವಾರ 50ನೇ ದಿನಕ್ಕೆ ಕಾಲಿಟ್ಟಿದೆ.
ಇನ್ನಷ್ಟು ಹೆಚ್ಚಿನ ಜನರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.
‘ರಾಜಪಕ್ಸ ಕುಟುಂಬ ರಾಜಕೀ ಯ ಕ್ಷೇತ್ರ ತೊರೆದಾಗ ಮಾತ್ರ ನಮ್ಮ ಹೋರಾಟ ಕೊನೆಯಾಗಲಿದೆ. ಅವರ ಎಲ್ಲ ತಪ್ಪುಗಳಿಗಾಗಿ ಅವರನ್ನು ಜನತಾ ನ್ಯಾಯಾಲಯದ ಮುಂದೆ ನಿಲ್ಲಿಸಲಾಗುವುದು’ ಎಂದು ಪ್ರತಿಭಟನಕಾರ ಚಮೀರಾ ಜೀವಂತ ಹೇಳಿದರು.
ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶ ದಿವಾಳಿಯ ಅಂಚಿನಲ್ಲಿದೆ. ಆಹಾರ, ಇಂಧನ, ಔಷಧ, ಅಡುಗೆ ಅನಿಲ, ಬೆಂಕಿ ಕಡ್ಡಿಯಿಂದ ಹಿಡಿದು ಶೌಚಾಲಯದ ಕಾಗದದವರೆಗೂ ಅಗತ್ಯ ವಸ್ತುಗಳ ತೀವ್ರ ಕೊರತೆ ಉಂಟಾಗಿದ್ದು, ಇರುವ ಅಲ್ಪಸ್ವಲ್ಪ ದಾಸ್ತಾನಿಗೆ ಜನರು ಸರದಿಯಲ್ಲಿ ಕಾಯುಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ‘ಜಿಜಿಜಿ’ (ಗೋಟಾ ಗೋ ಗಾಮಾ (ಗ್ರಾಮ)’ಘೋಷಣೆ ಕೂಗಿದರು.
ಆರ್ಥಿಕ ಬಿಕ್ಕಟ್ಟು ದೇಶದಲ್ಲಿ ರಾಜ ಕೀಯ ಅಶಾಂತಿ ಸೃಷ್ಟಿಸಿದೆ. ಮಹಿಂದಾ ರಾಜಪಕ್ಸ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದಂತೆ, ಅವರ ತಮ್ಮ ಗೊಟಬಯ ರಾಜಪಕ್ಸ ಕೂಡಅಧ್ಯಕ್ಷ ಸ್ಥಾನಕ್ಕೆ ರಾಜೀ ನಾಮೆ ಸಲ್ಲಿಸಬೇಕು ಎಂದು ಪ್ರತಿಭಟನಕಾರರು ಪಟ್ಟುಹಿಡಿದಿದ್ದಾರೆ. ಆದರೆ, ರಾಜೀನಾಮೆಗೆ ಗೊಟಬಯ ನಿರಾಕರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.