ADVERTISEMENT

ಆರ್ಥಿಕ ದಿವಾಳಿತನದತ್ತ ಸಾಗಲಿದೆಯೇ ದ್ವೀಪರಾಷ್ಟ್ರ ಶ್ರೀಲಂಕಾ? ಇಲ್ಲಿದೆ ಮಾಹಿತಿ...

ಐಎಎನ್ಎಸ್
Published 3 ಜನವರಿ 2022, 2:39 IST
Last Updated 3 ಜನವರಿ 2022, 2:39 IST
ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸೆ
ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸೆ   

ಕೊಲಂಬೊ: 'ಶ್ರೀಲಂಕಾವು ಗಂಭೀರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಹಣದುಬ್ಬರವು ದಾಖಲೆಯ ಮಟ್ಟಕ್ಕೆ ಏರುತ್ತಿದೆ. ಆಹಾರ ಪದಾರ್ಥಗಳು ಜನರ ಕೈಗೆಟುಕದಂತಾಗಿವೆ. ದೇಶದ ಖಜಾನೆ ಬತ್ತಿ ಹೋಗುತ್ತಿದೆ. ಹೀಗಾಗಿ 2022 ರಲ್ಲಿ ದ್ವೀಪರಾಷ್ಟ್ರ ದಿವಾಳಿಯಾಗಬಹುದಾದ ಆತಂಕ ಎದುರಿಸುತ್ತಿದೆ,' ಎಂದು ಮಾಧ್ಯಮ ಸಂಸ್ಥೆ 'ದಿ ಗಾರ್ಡಿಯನ್' ವರದಿ ಮಾಡಿದೆ.

ರಾಜಪಕ್ಸೆ ಸೋದರರನೇತೃತ್ವದ ಸರ್ಕಾರ ಎದುರಿಸುತ್ತಿರುವ ಕುಸಿತಕ್ಕೆ ಕೋವಿಡ್ ಬಿಕ್ಕಟ್ಟು, ಪ್ರವಾಸೋದ್ಯಮದ ನಷ್ಟ ಕಾರಣವೆಂದು ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ. ಆದರೆ, ಹೆಚ್ಚಿನ ಸರ್ಕಾರಿ ವೆಚ್ಚ, ತೆರಿಗೆ ಕಡಿತಗಳಿಂದ ಆದಾಯ ಕೊರತೆ, ಚೀನಾಕ್ಕೆ ಮರುಪಾವತಿಸಬೇಕಿರುವ ಅಪಾರ ಸಾಲವೂ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಿವೆ. ವಿದೇಶಿ ವಿನಿಮಯ ಮೀಸಲು ಒಂದು ದಶಕದಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ ಎಂದು ವರದಿ ಹೇಳಿದೆ.

ಏತನ್ಮಧ್ಯೆ, ದೇಶೀಯ ಸಾಲಗಳು ಮತ್ತು ವಿದೇಶಿ ಬಾಂಡ್‌ಗಳನ್ನು ಪಾವತಿಸಲು ಸರ್ಕಾರವು ನೋಟು ಮುದ್ರಣಕ್ಕೆ ಮೊರೆ ಹೋಗಿದೆ. ಈ ನಡೆ ಹಣದುಬ್ಬರವನ್ನು ಮತ್ತಷ್ಟು ಉತ್ತೇಜಿಸಿದೆ.

ADVERTISEMENT

ಸಾಂಕ್ರಾಮಿಕ ರೋಗದ ಆರಂಭದಿಂದಲೂ 5,00,000 ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.

'ಹಣದುಬ್ಬರವು ನವೆಂಬರ್‌ನಲ್ಲಿ ಶೇ 11.1ಕ್ಕೆ ತಲುಪಿದೆ. ಇದು ದಾಖಲೆಯ ಮಟ್ಟವೂ ಹೌದು. ಜತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಜನರನ್ನು ಕಾಡುತ್ತಿದೆ. ಶ್ರೀಲಂಕಾ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿದೆ ಎಂದು ರಾಜಪಕ್ಸೆ ಘೋಷಿಸಿದ ನಂತರ, ಅಕ್ಕಿ, ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳನ್ನು ನಿಗದಿಪಡಿಸಿದ ಸರ್ಕಾರಿ ಬೆಲೆಗೆ ಮಾರಾಟ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಮಿಲಿಟರಿಗೆ ಅಧಿಕಾರವನ್ನು ನೀಡಲಾಯಿತು. ಆದರೆ, ಇದು ನಾಗರಿಕರಿಗೆ ದೊಡ್ಡ ಮಟ್ಟದ ಪರಿಹಾರವನ್ನೇನೂ ನೀಡಿಲ್ಲ,' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.