ಕೊಲಂಬೊ: ‘ಶೀಲಂಕಾವು ಹೆಚ್ಚಾಗಿ ಅವಲಂಬಿತವಾಗಿರುವ ಚಹಾ ರಫ್ತು ಮತ್ತು ಪ್ರವಾಸೋದ್ಯಮ ಕೋವಿಡ್ನಿಂದಾಗಿ ತೊಂದರೆಗೊಳಗಾಗಿದೆ. ಹಾಗಾಗಿ, ದೇಶವು ವಿದೇಶಿ ವಿನಿಮಯದಲ್ಲಿ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ’ ಎಂದು ಶ್ರೀಲಂಕಾದ ಹಣಕಾಸು ಸಚಿವ ಬೆಸಿಲ್ ರಾಜಪಕ್ಸೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
‘ಕೋವಿಡ್–19 ಪಿಡುಗಿನಿಂದಾಗಿ ದೇಶದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ. ಶ್ರೀಲಂಕಾವು ಬಾಹ್ಯ ಮತ್ತು ಆಂತರಿಕ ಬಿಕ್ಕಟ್ಟನ್ನು ಎದುರಿಸಿದೆ. ದೇಶದ ಆದಾಯ ಕುಸಿಯುತ್ತಿದೆ. ಆದರೆ ಖರ್ಚು ಹೆಚ್ಚಾಗುತ್ತಿದೆ. ವಿದೇಶಿ ವಿನಿಮಯ ಮೀಸಲು ಸಂಗ್ರಹವು ಶೂನ್ಯಕ್ಕೆ ಹತ್ತಿರವಾಗಿದೆ ಎಂದು ಕೇಂದ್ರ ಬ್ಯಾಂಕಿನ ಅಂಕಿಅಂಶ ಹೇಳಿದೆ’ ಎಂದು ಅವರು ಸದನಕ್ಕೆ ತಿಳಿಸಿದರು.
‘ಕೋವಿಡ್ನಿಂದಾಗಿ ಈ ವರ್ಷ ಸರ್ಕಾರದ ಆದಾಯ ಕುಸಿದಿದೆ’ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.
‘ಸರ್ಕಾರದ ಮುಖ್ಯ ಆದಾಯದ ಮೂಲವೆಂದರೆ ವಾಹನಗಳ ಆಮದು. ಆದರೆ, ನಾವು ಕಳೆದ ಒಂದೂವರೆ ವರ್ಷದಿಂದ ವಾಹನಗಳ ಆಮದನ್ನು ನಿಷೇಧಿಸಿದ್ದೇವೆ. ವಿದೇಶಿ ವಿನಿಮಯದಲ್ಲಿ ಉಂಟಾದ ತೊಂದರೆಯಿಂದಾಗಿ ಈ ವರ್ಷ ಕಸ್ಟಮ್ಸ್ನಿಂದ ಬರುತ್ತಿದ್ದ ಆದಾಯ ಕುಸಿದಿದೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.