ಗಾಜಾ ನಗರ: ಮುಸ್ಲಿಂ ಜಿಹಾದಿ ಉಗ್ರರ ರಾಕೆಟ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೇನೆ ಬುಧವಾರ ವೈಮಾನಿಕ ದಾಳಿ ನಡೆಸಿ ಮತ್ತಷ್ಟು ಜಿಹಾದಿ ಉಗ್ರರನ್ನು ಹತ್ಯೆ ಮಾಡಿದೆ. ಇದರಿಂದ ಎರಡು ದಿನಗಳಲ್ಲಿ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
‘ಎರಡು ದಿನಗಳ ಹಿಂದೆ ವೈಮಾನಿಕ ದಾಳಿ ನಡೆಸಿ ಮುಸ್ಲಿಂ ಜಿಹಾದಿಗಳ ಹಿರಿಯ ಕಮಾಂಡರ್ನನ್ನು ಹತ್ಯೆ ಮಾಡಲಾಗಿತ್ತು. ಈತ ಈಚೆಗೆ ಇಸ್ರೇಲ್ ಮೇಲೆ ನಡೆದಿದ್ದ ದಾಳಿಯ ಸಂಚುಕೋರ ಎನ್ನುವ ಆರೋಪ ಇತ್ತು. ಇದಾದ ಬಳಿಕ ಜಿಹಾದಿಗಳು, ಎರಡು ದಿನಗಳಲ್ಲಿ ಇಸ್ರೇಲ್ ಸಮುದಾಯವನ್ನು ಗುರಿಯಾಗಿರಿಸಿ 250ಕ್ಕೂ ಹೆಚ್ಚು ರಾಕೆಟ್ಗಳನ್ನು ಉಡಾಯಿಸಿದ್ದಾರೆ’ ಎಂದು ಸೇನೆ ತಿಳಿಸಿದೆ.
ದಾಳಿ–ಪ್ರತಿದಾಳಿಗಳಿಂದಾಗಿ ಇಸ್ರೇಲ್ ಜನಜೀವನ ಸ್ತಬ್ಧವಾಗಿದೆ. ಗಾಜಾ ಗಡಿ ಬಳಿಯಲ್ಲಿರುವ ಇಸ್ರೇಲ್ ಸಮುದಾಯದ ಶಾಲೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಲಾಗಿದೆ. ಸಾರ್ವಜನಿಕರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ.
‘ಹಾನಿ ಉಂಟಾಗುವುದನ್ನು ನಿಯಂತ್ರಿಸುವ ಉದ್ದೇಶದಿಂದ, ಮುಸ್ಲಿಂ ಜಿಹಾದಿಗಳನ್ನಷ್ಟೆ ಗುರಿಯಾಗಿರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಸೇನೆ ತಿಳಿಸಿದೆ.
ನೆತನ್ಯಾಹು ಎಚ್ಚರಿಕೆ
‘ರಾಕೆಟ್ ದಾಳಿ ನಡೆಸುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮತ್ತಷ್ಟು ಪ್ರತಿದಾಳಿ ಎದುರಿಸಬೇಕಾಗುತ್ತದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಇರಾನ್ ಬೆಂಬಲಿತ ಮುಸ್ಲಿಂ ಜಿಹಾದಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
‘ಅವರಿಗೆ ಇರುವುದು ಒಂದೇ ಆಯ್ಕೆ. ದಾಳಿ ನಿಲ್ಲಿಸುವುದು ಅಥವಾ ಮತ್ತಷ್ಟು ಪ್ರತಿದಾಳಿ ಎದುರಿಸುವುದು. ಆಯ್ಕೆಯ ನಿರ್ಧಾರ ಅವರಿಗೇ ಬಿಟ್ಟಿದ್ದು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.