ನಿತ್ಯಾನಂದ
ನವದೆಹಲಿ: ಭಾರತದಿಂದ ಪಲಾಯನ ಮಾಡಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ಥಾಪಿಸಿರುವ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ದ ಜತೆಗೆ ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿರುವುದಾಗಿ ಬೊಲಿವಿಯಾ ಸರ್ಕಾರ ಹೇಳಿದೆ.
‘ಭೂಕಬಳಿಕೆಯಲ್ಲಿ ಭಾಗಿಯಾಗಿರುವ ಆಪಾದಿತ ರಾಷ್ಟ್ರ, ಕಾಲ್ಪನಿಕ ‘ಕೈಲಾಸ’ದೊಂದಿಗೆ ಬೊಲಿವಿಯಾ ಸರ್ಕಾರ ರಾಜತಾಂತ್ರಿಕ ಸಂಬಂಧವನ್ನು ಮುಂದುವರಿಸುವುದಿಲ್ಲ’ ಎಂದು ಬೊಲಿವಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಈ ಬಗ್ಗೆ ಕೈಲಾಸದ ‘ಹೋಲಿ ಸೀ ಆಫ್ ಹಿಂದೂಯಿಸಂನ ಪತ್ರಿಕಾ ಕಚೇರಿ’ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಅಮೆಜಾನ್ ಪ್ರದೇಶದ ಸ್ಥಳೀಯ ಜನರಿಗೆ ಸೇರಿದ ಜಾಗ ಕಬಳಿಸಲು ಹುನ್ನಾರ ನಡೆಸಿದ ಆರೋಪದ ಮೇಲೆ, ಈಕ್ವೆಡಾರ್ನ ಒಂದು ದ್ವೀಪದಲ್ಲಿ ಇದೆ ಎಂದು ನಂಬಲಾಗಿರುವ ‘ಕೈಲಾಸ’ದ 20 ಸದಸ್ಯರನ್ನು ಬಂಧಿಸಿ, ಅವರನ್ನು ಅವರ ಮೂಲ ದೇಶಗಳಿಗೆ ಗಡೀಪಾರು ಮಾಡಲಾಗಿದೆ. ಸ್ಥಳೀಯರ ಭೂಮಿ ಪಡೆದು ಒಂದು ಸಾವಿರ ವರ್ಷಕ್ಕೆ ಮಾಡಿಕೊಂಡಿದ್ದ ಗುತ್ತಿಗೆ ಒಪ್ಪಂದವನ್ನು ರದ್ದುಪಡಿಸಲಾಗಿದೆ ಎಂದು ಬೊಲಿವಿಯಾ ಸರ್ಕಾರದ ಅಧಿಕಾರಿಗಳು ಕಳೆದ ವಾರ ತಿಳಿಸಿದ್ದರು.
ಗಡೀಪಾರಾದ ಪ್ರಜೆಗಳಲ್ಲಿ ಭಾರತ, ಅಮೆರಿಕ, ಸ್ವೀಡನ್ ಮತ್ತು ಚೀನಾದವರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.