ಇಸ್ಲಾಮಾಬಾದ್/ಲಾಹೋರ್: ಗುರುನಾನಕರ ಜನ್ಮಸ್ಥಳವಾದ ನಂಕಾನಾ ಸಾಹಿಬ್ ಗುರುದ್ವಾರದಲ್ಲಿ ಭಾರತದ ಸಿಖ್ಖರು ಸೇರಿದಂತೆ ಅಪಾರ ಸಂಖ್ಯೆಯ ಸಿಖ್ ಧರ್ಮೀಯರು ಸೋಮವಾರ ಬೈಸಾಖಿ (ಹೊಸ ವರ್ಷಾಚರಣೆ) ಆಚರಿಸಿದರು.
ಸಿಖ್ ಹೊಸ ವರ್ಷದ ಆರಂಭ ಬೈಸಾಖಿ. 1699ರಲ್ಲಿ ಗುರು ಗೋವಿಂದ ಸಿಂಗ್ ನೇತೃತ್ವದಲ್ಲಿ ಖಲ್ಸಾ ಪಂಥದ (ಸಂತ– ಯೋಧರು) ರಚನೆಯನ್ನು ಇದು ಗುರುತಿಸಲಿದೆ.
ಖಲ್ಸಾ ಪಂಥ ಉದಯವಾದ 326ನೇ ವಾರ್ಷಿಕೋತ್ಸವದಲ್ಲಿ 10 ಸಾವಿರಕ್ಕೂ ಹೆಚ್ಚು ವಿದೇಶಿ ಸಿಖ್ಖರು ಭಾಗಿಯಾಗಿದ್ದರು. ಇವರಲ್ಲಿ ಭಾರತದಿಂದ 6,700ಕ್ಕೂ ಹೆಚ್ಚು ಜನ ಆಗಮಿಸಿದ್ದರು. ಕೆನಡಾ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಇನ್ನಿತರ ದೇಶಗಳಿಂದ ಸಹ ಜನರು ಬಂದಿದ್ದರು ಎಂದು ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಪವಿತ್ರ ಸ್ಥಳಗಳ ಉಸ್ತುವಾರಿ ವಹಿಸಿಕೊಂಡಿರುವ ‘ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್‘ (ಇಟಿಪಿಬಿ) ತಿಳಿಸಿದೆ.
ಬೃಹತ್ ಪ್ರಮಾಣದಲ್ಲಿ ಸಿಖ್ಖರು ಜಮಾಯಿಸಲು ಅನುಕೂಲವಾಗುವಂತೆ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಇಟಿಪಿಬಿ ವಕ್ತಾರರು ತಿಳಿಸಿದ್ದಾರೆ.
50 ವರ್ಷದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಸರ್ಕಾರವು ಭಾರತೀಯ ಸಿಖ್ ಯಾತ್ರಿಕರಿಗೆ ಬೈಸಾಖಿ ಆಚರಣೆಗಾಗಿ 6,700ಕ್ಕೂ ಹೆಚ್ಚು ವೀಸಾಗಳನ್ನು ನೀಡಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.