ADVERTISEMENT

ವಾಯುಪಡೆಯ ಮೂರು ತುಕಡಿಗಳಿಗೆ ಪ್ರಶಂಸಾ ಪತ್ರ

ಪೂರ್ವ ಲಡಾಖ್‌: ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ

ಪಿಟಿಐ
Published 8 ಅಕ್ಟೋಬರ್ 2021, 15:32 IST
Last Updated 8 ಅಕ್ಟೋಬರ್ 2021, 15:32 IST
ಗಾಜಿಯಾಬಾದ್‌ನ ಹಿಂಡನ್ ವಾಯುಪಡೆ ನಿಲ್ದಾಣದಲ್ಲಿ ಶುಕ್ರವಾರ ನಡೆದ ಭಾರತೀಯ ವಾಯುಪಡೆಯ 89ನೇ ಸಂಸ್ಥಾಪನಾ ದಿನಾಚರಣೆಯಂದು ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ಅಧಿಕಾರಿಗಳಿಗೆ ಶೌರ್ಯಪದಕ ಪ್ರದಾನ ಮಾಡಿದರು –ಪಿಟಿಐ ಚಿತ್ರ
ಗಾಜಿಯಾಬಾದ್‌ನ ಹಿಂಡನ್ ವಾಯುಪಡೆ ನಿಲ್ದಾಣದಲ್ಲಿ ಶುಕ್ರವಾರ ನಡೆದ ಭಾರತೀಯ ವಾಯುಪಡೆಯ 89ನೇ ಸಂಸ್ಥಾಪನಾ ದಿನಾಚರಣೆಯಂದು ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ಅಧಿಕಾರಿಗಳಿಗೆ ಶೌರ್ಯಪದಕ ಪ್ರದಾನ ಮಾಡಿದರು –ಪಿಟಿಐ ಚಿತ್ರ   

ಹಿಂಡನ್ (ಉತ್ತರಪ್ರದೇಶ): ಚೀನಾದೊಂದಿಗಿನ ಸೇನಾ ಸಂಘರ್ಷದ ನಂತರ ಪೂರ್ವ ಲಡಾಕ್‌ನಲ್ಲಿ ಭಾರತದ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಭಾರತೀಯ ವಾಯುಪಡೆಯ ಮೂರು ತುಕಡಿಗಳಿಗೆ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅವರು ಶುಕ್ರವಾರ ಪ್ರಶಂಸಾ ಪತ್ರ (ಯುನಿಟ್ ಸೈಟೇಷನ್) ಪ್ರದಾನ ಮಾಡಿದರು.

ಇಲ್ಲಿನ ಹಿಂಡನ್ ವಾಯುನೆಲೆಯಲ್ಲಿ ನಡೆದ ಭಾರತೀಯ ವಾಯುಪಡೆಯ 89ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ತುಕಡಿಗಳಾದ ನಂ. 47 ಸ್ಕ್ವಾಡ್ರನ್ ಮಿಗ್‌– 29 ಫೈಟರ್ ಏರ್‌ಕ್ರಾಫ್ಟ್‌, 116 ಹೆಲಿಕಾಪ್ಟರ್ ಯೂನಿಟ್ ಮತ್ತು 2255 ಸ್ಕ್ವಾಡ್ರನ್‌ಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮತ್ತು ಚೀನಾದ ಸೈನ್ಯಗಳು ಪೂರ್ವ ಲಡಾಕ್‌ನ ಹಲವು ಭಾಗಗಳಲ್ಲಿ ಒಟ್ಟು 17 ತಿಂಗಳುಗಳ ಕಾಲ ಬೀಡುಬಿಟ್ಟಿದ್ದವು.

ADVERTISEMENT

‘1959ರಲ್ಲಿ ರಚನೆಯಾದ ನಂ. 47 ಸ್ಕ್ವಾಡ್ರನ್, ಸುಧಾರಿತ ಮಿಗ್- 29 ವಿಮಾನಗಳನ್ನು ಹೊಂದಿದೆ. 2019ರ ಫೆಬ್ರುವರಿಯಲ್ಲಿ ನಡೆದ ಬಾಲಾಕೋಟ್ ವಾಯುದಾಳಿಯ ನಂತರ ರಕ್ಷಣೆಗಾಗಿ ಈ ಸ್ಕ್ವಾಡ್ರನ್ ಅನ್ನು ನಿಯೋಜಿಸಲಾಗಿದೆ. ಆಗಸ್ಟ್ 1967ರ ಆಗಸ್ಟ್‌ನಲ್ಲಿ ರಚನೆಯಾದ 116 ಹೆಲಿಕಾಪ್ಟರ್ ಘಟಕವು ಸುಧಾರಿತ ಲೈಟ್ ಹೆಲಿಕಾಪ್ಟರ್ ‘ರುದ್ರ’ನನ್ನು ಒಳಗೊಂಡಿದೆ. 2255 ಸ್ಕ್ವಾಡ್ರನ್‌ ಲಡಾಕ್‌ನಲ್ಲಿ ಚಳಿಗಾಲದಂಥ ಕಠಿಣ ಪರಿಸ್ಥಿತಿಯಲ್ಲೂ ದೇಶದ ರಕ್ಷಣೆಗಾಗಿ ನಿಯೋಜಿತವಾಗಿತ್ತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೈಮಾನಿಕ ಪ್ರದರ್ಶನ

ಹಿಂಡನ್: ಭಾರತೀಯ ವಾಯುಪಡೆಯ 89ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ 75 ವಿಮಾನಗಳು ನೀಡಿದ ವೈಮಾನಿಕ ಪ್ರದರ್ಶನವು ನೋಡುಗರನ್ನು ಬೆರಗುಗೊಳಿಸಿತು.

ಇದೇ ಸಂದರ್ಭದಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನೂ ಪ್ರದರ್ಶಿಸಲಾಯಿತು.ಸಿ -17 ಗ್ಲೋಬ್‌ಮಾಸ್ಟರ್, ಜಾಗ್ವಾರ್, ಮಿಗ್- 29 ಜೆಟ್ ಫೈಟರ್ ಹಾಗೂ ‘ಆಕಾಶ ಗಂಗಾ’ದ ತಂಡದ ಸ್ಕೈಡೈವರ್‌ಗಳ ಆಕರ್ಷಕ ವೈಮಾನಿಕ ಪ್ರದರ್ಶನವು ಪ್ರೇಕ್ಷಕರನ್ನು ಮೋಡಿ ಮಾಡಿತು.

‘ವೈಮಾನಿಕ ಪ್ರದರ್ಶನ ಕುರಿತು ನಾವು ಮೊದಲೇ ಘೋಷಿಸಿರಲಿಲ್ಲ. ಇದನ್ನು ಅಚ್ಚರಿಯ ಪ್ಯಾಕೇಜ್ ಆಗಿ ಇರಿಸಿದ್ದೆವು’ ಎಂದು ಹಿರಿಯ ಐಎಎಫ್ ಅಧಿಕಾರಿಯೊಬ್ಬರು ತಿಳಿಸಿದರು.

ಡಾರ್ನಿಯರ್, ಎಲ್‌ಸಿಎ ತೇಜಸ್ ಮತ್ತು ರಫೇಲ್ ಫೈಟರ್ ಜೆಟ್‌ಗಳನ್ನು ಪ್ರದರ್ಶಿಸಲಾಯಿತು. ಅಂತೆಯೇ 1971ರ ಯುದ್ಧದಲ್ಲಿ ದೇಶದ ಗೆಲುವಿಗೆ ಕಾರಣವಾದ ವಿಮಾನಗಳ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಈ ಯುದ್ಧದಲ್ಲಿ ಭಾರತೀಯ ಸಶಸ್ತ್ರಪಡೆಗಳು ಸಾಧಿಸಿದ ವಿಜಯೋತ್ಸವದ 50ನೇ ವಾರ್ಷಿಕೋತ್ಸವದ ‘ಸ್ವರ್ಣಿಮ್ ವಿಜಯ್ ವರ್ಷ’ವನ್ನೂ ಇದೇ ವರ್ಷ ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.