ವಿಶ್ವಸಂಸ್ಥೆ; ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಟರ್ಕಿ ಪ್ರಧಾನಿ ತಯ್ಯಿಪ್ ಎರ್ಡೊಗನ್ ಅವರು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದು, ಈ ವರ್ಷದ ಆರಂಭದಲ್ಲಿ ಏರ್ಪಟ್ಟಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವು ಯುದ್ಧ ವಿರಾಮದಲ್ಲಿ ಕೊನೆಗೊಂಡಿದ್ದರಿಂದ ಬಹಳ ಸಂತಸವಾಗಿದೆ ಎಂದಿದ್ದಾರೆ.
ಭಯೋತ್ಪಾದನೆ ನಿಗ್ರಹಿಸುವಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಅತ್ಯಂತ ಅಗತ್ಯವಾಗಿದೆ. ಮಾತುಕತೆ ಮೂಲಕ ವಿಶ್ವಸಂಸ್ಥೆ ನಿರ್ಣಯದ ಆಧಾರದ ಮೇಲೆ ಭಾರತ ಮತ್ತು ಪಾಕಿಸ್ತಾನವು ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಬೇಕು. ಅದು ಕಾಶ್ಮೀರದಲ್ಲಿರುವ ನನ್ನ ಸಹೋದರ ಮತ್ತು ಸಹೋದರಿಯರಿಗೆ ಉತ್ತಮ ಎಂದಿದ್ದಾರೆ.
‘ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವುದು ಅತ್ಯಂತ ಪ್ರಮುಖವಾದುದ್ದಾಗಿದೆ. ಕಳೆದ ಏಪ್ರಿಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಎದ್ದಿದ್ದ ಉದ್ವಿಗ್ನತೆ ಸಂಘರ್ಷವಾಗಿ ಬದಲಾಗಿತ್ತು. ಯುದ್ಧವಿರಾಮದ ಮೂಲಕ ಅದು ಕೊನೆಗೊಂಡಿದ್ದು ಸಂತಸವಾಗಿದೆ’ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದ ಚರ್ಚೆ ವೇಳೆ ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ಬಳಿಕ ಅದಕ್ಕೆ ಪ್ರತಿಯಾಗಿ, ಭಾರತವು ಮೇ 7ರಂದು ಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆ ಪ್ರಾರಂಭಿಸಿತ್ತು. ಪಾಕಿಸ್ತಾನ ಪ್ರತಿ ದಾಳಿಗೆ ಯತ್ನಿಸಿದಾಗ, ಅದರ ಸೇನಾನೆಲೆಗಳ ಮೇಲೆ ಭಾರತ ದಾಳಿ ನಡೆಸಿತ್ತು.
ಈ ದಾಳಿಗಳು ನಾಲ್ಕು ದಿನಗಳ ತೀವ್ರ ಘರ್ಷಣೆಗಳಿಗೆ ಕಾರಣವಾಗಿದ್ದವು. ಮೇ 10ರಂದು ಯುದ್ಧ ವಿರಾಮದ ಮೂಲಕ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಒಪ್ಪಂದದೊಂದಿಗೆ ಸಂಘರ್ಷ ಕೊನೆಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.