ಲಂಡನ್: ಬ್ರಿಟನ್ ಸಂಸತ್ನ ಕೆಳಮನೆಯಲ್ಲಿ ಕೆಲವು ಸಂಸದರು ಕಾಶ್ಮೀರ ವಿಷಯ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಕೋರಿ ಸೂಚನೆ ಮಂಡಿಸಿದ್ದು, ಈ ನಡೆಗೆ ಭಾರತದಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ದೇಶದ ಅವಿಭಾಜ್ಯ ಪ್ರದೇಶವೊಂದಕ್ಕೆ ಸಂಬಂಧಿಸಿ ಯಾವುದೇ ವೇದಿಕೆಯಲ್ಲಿ ಪ್ರಸ್ತಾಪಿಸುವ ಮುನ್ನ, ಆ ವಿಷಯ ಕುರಿತ ವಾಸ್ತವಾಂಶಗಳ ಅರಿವಿರಬೇಕು’ ಎಂದೂ ಭಾರತ ಹೇಳಿದೆ.
‘ಕಾಶ್ಮೀರದಲ್ಲಿ ಮಾನವ ಹಕ್ಕುಗಳು’ ಎಂಬ ವಿಷಯ ಕುರಿತು ಚರ್ಚೆ ಕೋರಿ ‘ಸರ್ವ ಪಕ್ಷ ಸಂಸದೀಯ ಗುಂಪು’ (ಎಪಿಪಿಜಿ) ಸೂಚನೆ ಮಂಡಿಸಿತ್ತು.
‘ಪಾಕಿಸ್ತಾನ ಮೂಲದ, ಲೇಬರ್ ಪಾರ್ಟಿ ಸಂಸದರಾದ ನಾಜ್ ಶಾ ಅವರು ಭಾರತದ ಪ್ರಧಾನಿ ಕುರಿತು ಬಳಸಿದ ಭಾಷೆ ನಿರಾಶೆ ಮೂಡಿಸುವಂತಿದೆ. ಇದು ಸಂಸತ್ ಒದಗಿಸಿರುವ ವೇದಿಕೆಯ ದುರುಪಯೋಗ’ ಎಂದು ಭಾರತ ಪ್ರತಿಕ್ರಿಯಿಸಿದೆ.
ಈ ಕುರಿತು ವಿದೇಶ, ಕಾಮನ್ವೆಲ್ತ್ ಅಭಿವೃದ್ಧಿ ಕಚೇರಿ (ಎಫ್ಸಿಡಿಒ) ಅಧೀನದ ಏಷ್ಯಾ ವಿದ್ಯಮಾನಗಳ ಸಚಿವೆ ಅಮಂಡಾ ಮಿಲ್ಲಿಂಗ್ ಪ್ರತಿಕ್ರಿಯಿಸಿ, ‘ಕಾಶ್ಮೀರ ವಿವಾದ ದ್ವಿಪಕ್ಷೀಯ ವಿಷಯ ಎಂಬ ಬ್ರಿಟನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಬ್ರಿಟನ್ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಆದರೆ, ಈ ವಿವಾದ ಕುರಿತು ಭಾರತ ಹಾಗೂ ಪಾಕಿಸ್ತಾನ ರಾಜಕೀಯವಾದ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ವಿಷಯದಲ್ಲಿ ಪರಿಹಾರ ಕ್ರಮ ಸೂಚಿಸುವುದು ಇಲ್ಲವೇ ಮಧ್ಯಸ್ಥಿಕೆ ವಹಿಸುವುದು ಬ್ರಿಟನ್ನ ಕೆಲಸವಲ್ಲ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.