ಕೀವ್:ಮಾಸ್ಕೋದ ಪಡೆಗಳು ಕದನ ವಿರಾಮವನ್ನು ಮುರಿದಿದ್ದು, ನಾಗರಿಕ ಸ್ಥಳಾಂತರ ಕಾರ್ಯ ವಿಳಂಬವಾಗುತ್ತಿದೆ ಎಂದು ಉಕ್ರೇನ್ನ ಬಂದರು ನಗರವಾದ ಮಾರಿಯುಪೋಲ್ನ ಅಧಿಕಾರಿಗಳು ತಿಳಿಸಿದ್ದಾರೆ. ನಗರವನ್ನು ರಷ್ಯಾದ ಪಡೆಗಳು ಸುತ್ತುವರಿದಿವೆ ಎಂದೂ ಆರೋಪಿಸಿದ್ದಾರೆ.
ರಷ್ಯಾದ ಕಡೆಯವರು ಕದನ ವಿರಾಮಕ್ಕೆ ಬದ್ಧವಾಗಿಲ್ಲ. ಮಾರಿಯುಪೋಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೆಲ್ ದಾಳಿಯನ್ನು ಮುಂದುವರೆಸಿದ್ದಾರೆ. ಭದ್ರತಾ ಕಾರಣಗಳಿಗಾಗಿ, ನಾಗರಿಕರ ಸ್ಥಳಾಂತರ ಕಾರ್ಯವನ್ನು ಮುಂದೂಡಲಾಗಿದೆ' ಎಂದು ನಗರದ ಅಧಿಕಾರಿಗಳು ಸಾಮಾಜಿಕ ಮಾಧ್ಯಮದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾನವೀಯ ಪರಿಹಾರ ಕಾರ್ಯ ಕೈಗೊಳ್ಳಲು ಮತ್ತು ನಾಗರಿಕರು ನಗರದಿಂದ ಹೊರ ಹೋಗಲು ಉಕ್ರೇನ್ನ ಮಾರಿಯುಪೋಲ್ ಮತ್ತು ವೋಲ್ನೋವಾಖಾ ಪ್ರದೇಶದಲ್ಲಿ ರಷ್ಯಾ ಸೇನೆ ಇಂದು ಬೆಳಗ್ಗೆಭಾಗಶಃ ಕದನ ವಿರಾಮ ಘೋಷಿಸಿತ್ತು.
ವ್ಯೂಹಾತ್ಮಕವಾಗಿ ಪ್ರಾಮುಖ್ಯತೆ ಪಡೆದಿರುವ ಮಾರಿಯುಪೋಲ್ ಮೇಲೆ ರಷ್ಯಾ ಕೆಲವು ದಿನಗಳಿಂದ ನಿರಂತರ ದಾಳಿ ಕೈಗೊಂಡಿತ್ತು. ನಗರಕ್ಕೆ ನೀರು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಜನ ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ, ಮಾನವೀಯ ಪರಿಹಾರ ಕಾರ್ಯ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಮಾರಿಯುಪೋಲ್ ಮೇಯರ್ ಆಗ್ರಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.