ADVERTISEMENT

ಕೋವಿಡ್–19 ಲಸಿಕೆ ಮಾತ್ರವೇ ಜಗತ್ತನ್ನು ಸಹಜ ಸ್ಥಿತಿಗೆ ಮರಳಿಸಬಲ್ಲದು: ಗುಟೆರಸ್

ಏಜೆನ್ಸೀಸ್
Published 16 ಏಪ್ರಿಲ್ 2020, 7:12 IST
Last Updated 16 ಏಪ್ರಿಲ್ 2020, 7:12 IST
   

ನವದೆಹಲಿ:ಬಹುಶಃ ಕೋವಿಡ್‌–19 ಲಸಿಕೆಮಾತ್ರವೇ ಜಗತ್ತನ್ನು ಸಹಜ ಸ್ಥಿತಿಗೆ ಮರಳಿಸಬಲ್ಲದು.ಈ ವರ್ಷಾಂತ್ಯದೊಳಗೆ ಅದನ್ನು ಕಂಡುಹಿಡಿಯುವ ವಿಶ್ವಾಸವಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೊನಿಯೊ ಗುಟೆರಸ್ಹೇಳಿದ್ದಾರೆ.

ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರುವ ಆಫ್ರಿಕಾದ ಸುಮಾರು ಐವತ್ತಕ್ಕೂ ಹೆಚ್ಚು ರಾಷ್ಟ್ರಗಳ ನಾಯಕರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ ಗುಟೆರಸ್‌, ‘ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಲಸಿಕೆಯು ಜಗತ್ತನ್ನು ಸಾಮಾನ್ಯ ಸ್ಥಿತಿಗೆ ಹಿಂದಿರುಗಿಸಲು ಇರುವ ಏಕೈಕ ಸಾಧನ. ಇದು ಲಕ್ಷಾಂತರ ಜೀವಗಳನ್ನು ಕಾಪಾಡಲಿದೆ ಮತ್ತು ಲೆಕ್ಕವಿಲ್ಲದಷ್ಟು ಹಣವನ್ನು ಉಳಿಸುತ್ತದೆ’ ಎಂದು ಹೇಳಿದ್ದಾರೆ.

ಜಾಗತಿಕ ಪಿಡುಗಿನ ನಿಯಂತ್ರಣಕ್ಕೆ ಸಾಮರಸ್ಯದಿಂದ ಕೈ ಜೋಡಿಸುವಂತೆ ಕರೆ ನೀಡಿರುವ ಅವರು, ಲಸಿಕೆಯನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಎಲ್ಲರೂ ನಾವು ಮಹತ್ವಾಕಾಂಕ್ಷೆಯಿಂದ ಪ್ರಯತ್ನ ಮಾಡಬೇಕು. 2020ರ ಅಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ ದೊರೆಯುವಂತಾಗಬೇಕು ಎಂದು ಹೇಳಿದ್ದಾರೆ.

ADVERTISEMENT

ಜಾಗತಿಕ ಪಿಡುಗಿನ ವಿರುದ್ಧ ವಿಶ್ವಸಂಸ್ಥೆಯ ಮಾನವೀಯ ಕಾರ್ಯಗಳಿಗಾಗಿ ₹ 15ಸಾವಿರ ಕೋಟಿ ದೇಣಿಗೆ ನೀಡುವಂತೆ ಗುಟೆರಸ್‌ ಮಾರ್ಚ್‌ 25 ರಂದು ಕರೆ ನೀಡಿದ್ದರು. ಆ ಬಗ್ಗೆ ಮಾತನಾಡಿದ ಅವರು, ಬೇಡಿಕೆ ಮೊತ್ತದ ಶೇ. 20 ರಷ್ಟು ದೇಣಿಗೆ ಇದುವರೆಗೆ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆಫ್ರಿಕಾದ 47 ಸದಸ್ಯ ರಾಷ್ಟ್ರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಕೋವಿಡ್‌–19 ಪರೀಕ್ಷೆ ನಡೆಸಲು ಸಜ್ಜಾಗಿರುವುದಾಗಿಯೂ ತಿಳಿಸಿದ್ದಾರೆ.

ಮಾತ್ರವಲ್ಲದೆ, ಸೋಂಕು ನಿಯಂತ್ರಣಕ್ಕಾಗಿ ಆಫ್ರಿಕಾ‌ ಸರ್ಕಾರಗಳು ಮಾಡಿದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಅದಕ್ಕೆ ಪೂರಕವಾಗಿ ಉಗಾಂಡದಲ್ಲಿ ಜನರು ಆದಾಯ ತೆರಿಗೆ ಮರುಪಾವತಿಗೆ ಹೆಚ್ಚುವರಿ ಸಮಯ ನಿಗದಿ ಪಡಿಸಿರುವುದು, ನಮೀಬಿಯಾದಲ್ಲಿಕೆಲಸ ಕಳೆದುಕೊಂಡವರಿಗಾಗಿ ತುರ್ತು ಆದಾಯ ಯೋಜನೆ ರೂಪಿಸಿರುವುದು, ಕೇಪ್‌ ವೆರ್ಡ್‌ನಲ್ಲಿಆಹಾರ ನೆರವು ನೀಡುತ್ತಿರುವುದು ಮತ್ತು ಈಜಿಪ್ಟ್‌ನಲ್ಲಿ ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿ ನೀಡಿರುವುದನ್ನು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.