ವಿಶ್ವಸಂಸ್ಥೆ
ಜಿನೇವಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಹಸೀನಾ ಶೇಖ್ ಅವರು ವಿರುದ್ಧ ನಡೆದಿದ್ದ ಪ್ರತಿಭಟನೆಯ ವೇಳೆ 6 ವಾರಗಳಲ್ಲಿ ಸುಮಾರು 1,400 ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ(ಒಎಚ್ಸಿಎಚ್ಆರ್) ಬುಧವಾರ ಅಂದಾಜಿಸಿದೆ.
ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಹಸೀನಾ ನೇತೃತ್ವದ ಸರ್ಕಾರವೇ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ. ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷ, ಬಾಂಗ್ಲಾದೇಶದ ಭದ್ರತಾಪಡೆಗಳು ಮತ್ತು ಗುಪ್ತಚರ ವಿಭಾಗಗಳು ವ್ಯವಸ್ಥಿತವಾಗಿ ಈ ಕೃತ್ಯದಲ್ಲಿ ಭಾಗಿಯಾಗಿವೆ. ಈ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಒಎಚ್ಸಿಎಚ್ಆರ್ನ ಹೊಸ ವರದಿಯೊಂದು ತಿಳಿಸಿದೆ.
ಕಳೆದ ವರ್ಷ, ಜುಲೈ 1ರಿಂದ ಆಗಸ್ಟ್ 15ರವರೆಗೆ 1,400 ಮಂದಿ ಮೃತಪಟ್ಟಿದ್ದಾರೆ ಮತ್ತು ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಅವರಲ್ಲಿ ಬಹುತೇಕರ ಮೇಲೆ ಬಾಂಗ್ಲಾದ ಭದ್ರತಾ ಪಡೆಗಳು ಗುಂಡು ಹಾರಿಸಿದ್ದವು ಎಂದು ಹಲವು ನಂಬಲರ್ಹ ಮೂಲಗಳನ್ನು ಉಲ್ಲೇಖಿಸಿ ಒಎಚ್ಸಿಎಚ್ಆರ್ ವರದಿ ಮಾಡಿದೆ.
ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ದೇಶದ ನಾಯಕತ್ವ ಮತ್ತು ಉನ್ನತ ಭದ್ರತಾ ಅಧಿಕಾರಿಗಳ ನೇತೃತ್ವದಲ್ಲಿ ಕಾನೂನುಬಾಹಿರ ಹತ್ಯೆಗಳು, ಅನಿಯಂತ್ರಿತ ಬಂಧನ ಮತ್ತು ಚಿತ್ರಹಿಂಸೆ ನಡೆದಿದೆ ಎಂದು ಮಾನವ ಹಕ್ಕುಗಳ ಕಚೇರಿಯ ಮುಖ್ಯಸ್ಥ ವೋಲ್ಕರ್ ಟರ್ಕ್ ಅವರು ಹೇಳಿದ್ದಾರೆ.
ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರ ಆಹ್ವಾನದ ಮೇರೆಗೆ ವಿಶ್ವಸಂಸ್ಥೆಯ ಸತ್ಯಶೋಧನಾ ಸಮಿತಿಯ ಬಾಂಗ್ಲಾದಲ್ಲಿ ತನಿಖೆ ನಡೆಸಿತ್ತು.
ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ನಂತರ ಭುಗಿಲೆದ್ದ ಗಲಭೆಗಳ ವೇಳೆ ಹಿಂದೂಗಳ ಮನೆಗಳು ಅಂಗಡಿಗಳು ಪೂಜಾ ಸ್ಥಳಗಳ ಮೇಲೆ ವ್ಯಾಪಕ ದಾಳಿಗಳು ನಡೆದವು.
ಹಿಂದೂಗಳು ಅಹಮದಿಯಾ ಮುಸ್ಲಿಮರು ಹಾಗೂ ಛಟ್ಟೋಗ್ರಾಮದ ಗುಡ್ಡಗಾಡು ಪ್ರದೇಶದ ಮೂಲನಿವಾಸಿಗಳ ಮೇಲೆ ಹೆಚ್ಚು ದಾಳಿ
ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಪರ ಸಹಾನುಭೂತಿ ಹೊಂದಿರುವವರನ್ನೇ ಗುರಿಯಾಗಿಸಿ ಹೆಚ್ಚು ದಾಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.