ಕೈರೊ: ಸುಡಾನ್ನ ಸಂಘರ್ಷದ ವೇಳೆ ರಾಜಧಾನಿ ಖಾರ್ಟೋಮ್ನ ಅನಾಥಾಶ್ರಮವೊಂದರಲ್ಲಿ ಸಿಲುಕಿದ್ದ ಸುಮಾರು 300 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಯುನಿಸೆಫ್ ನೆರವು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
‘ಈ 300 ಮಕ್ಕಳನ್ನು ಈಶಾನ್ಯ ಆಫ್ರಿಕಾದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಏಪ್ರಿಲ್ ಮಧ್ಯಂತರದಿಂದ ಈವರೆಗೆ ಹಸಿವು, ಅನಾರೋಗ್ಯದಿಂದ 71 ಮಕ್ಕಳು ಅಲ್–ಮೆಕೋಮಾ ಅನಾಥಾಶ್ರಮದಲ್ಲಿ ಅಸುನೀಗಿದ್ದಾರೆ. ಮೃತರಲ್ಲಿ 3 ತಿಂಗಳ ಹಸುಳೆಗಳೇ ಹೆಚ್ಚು’ ಎಂದು ಯುನಿಸೆಫ್ನ ಯುನೈಟೆಡ್ ನೇಷನ್ಸ್ ಮಕ್ಕಳ ಸಂಸ್ಥೆಯ ವಕ್ತಾರ ರಿಕಾರ್ಡೊ ಪೈರ್ಸ್ ತಿಳಿಸಿದ್ದಾರೆ.
ಈ ಮಕ್ಕಳ ಜವಾಬ್ದಾರಿಯನ್ನು ಸುಡಾನ್ನ ಸಾಮಾಜಿಕ ಅಭಿವೃದ್ಧಿ ಮತ್ತು ಆರೋಗ್ಯ ಸಚಿವಾಲಯ ವಹಿಸಿಕೊಂಡಿದ್ದು, ಮಕ್ಕಳಿಗೆ ಅಗತ್ಯವಿರುವ ಆರೋಗ್ಯ ತಪಾಸಣೆ, ವೈದ್ಯಕೀಯ ಆರೈಕೆ, ಆಹಾರ, ಶೈಕ್ಷಣಿಕ ಮತ್ತು ಆಟ ಸೇರಿದಂತೆ ಮಾನವೀಯ ಸಹಕಾರದ ಜವಾಬ್ದಾರಿಯನ್ನು ಯುನೆಸೆಫ್ ನೋಡಿಕೊಂಡಿದೆ.
ಒಂದು ತಿಂಗಳ ಹಸುಗಳೆಗಳಿಂದ ಹಿಡಿದು 15 ವರ್ಷದ ಮಕ್ಕಳನ್ನು ರಕ್ಷಿಸಿ, ಖಾರ್ಟೋಮ್ನಿಂದ ಆಗ್ನೇಯಕ್ಕೆ ಸುಮಾರು 135 ಕಿ.ಮೀ ದೂರದಲ್ಲಿರುವ ಜಜಿರಾ ಪ್ರಾಂತ್ಯದ ರಾಜಧಾನಿ ಮದನಿಗೆ ಸ್ಥಳಾಂತರಿಸಲಾಗಿದೆ. ಮಕ್ಕಳೊಂದಿಗೆ 70 ಕೇರ್ಟೇಕರ್ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ರೆಡ್ ಕ್ರಾಸ್ನ ಅಂತರರಾಷ್ಟ್ರೀಯ ಸಮಿತಿ ತಿಳಿಸಿದೆ.
ಏತನ್ಮಧ್ಯೆ, ಸ್ಥಳೀಯ ಸ್ವಯಂಸೇವಕರು ಈ ವಾರದ ಆರಂಭದಲ್ಲಿ ಇತರ 77 ಮಕ್ಕಳನ್ನು ಕರಾವಳಿಯ ಪ್ರತ್ಯೇಕ ಮನೆಗಳಿಂದ ಸ್ಥಳಾಂತರಿಸಿ, ಜಜಿರಾ ಪ್ರಾಂತ್ಯದ ಹಸಹಿಸಾ ಪಟ್ಟಣದ ಶಾಲೆಯಲ್ಲಿ 11 ಜನ ವಯಸ್ಕರೊಂದಿಗೆ ಮಕ್ಕಳು ತಾತ್ಕಾಲಿಕವಾಗಿ ಆಶ್ರಯ ಪಡೆದಿದ್ದಾರೆ ಎಂದು ಹದ್ರೀನ್ನ ಸ್ವಯಂಸೇವಕ ನಜೀಮ್ ಸಿರಾಗ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.