ADVERTISEMENT

ಮುಂಬೈ ದಾಳಿ ಆರೋಪಿ ರಾಣಾ ಬಿಡುಗಡೆಗೆ ಅಮೆರಿಕ ವಿರೋಧ

ಲಾಸ್‌ಏಂಜಲೀಸ್ ನ್ಯಾಯಾಲಯದಲ್ಲಿ ಗೊತ್ತುವಳಿ ಮಂಡಿಸಿದ ಸರ್ಕಾರ

ಪಿಟಿಐ
Published 1 ಡಿಸೆಂಬರ್ 2020, 6:34 IST
Last Updated 1 ಡಿಸೆಂಬರ್ 2020, 6:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವ್ವೂರ್ ರಾಣಾನ ಬಿಡುಗಡೆಯನ್ನುಅಮೆರಿಕ ಸರ್ಕಾರ ವಿರೋಧಿಸಿದೆ. ಆತ ಪರಾರಿಯಾಗುವ ಸಾಧ್ಯತೆ ಇರುವುದರಿಂದ ಬಿಡುಗಡೆ ಸರಿಯಲ್ಲ ಎಂದು ಕ್ಯಾಲಿಫೋರ್ನಿಯಾದ ಫೆಡರಲ್‌ ಕೋರ್ಟ್‌ಗೆ ಸರ್ಕಾರ ತಿಳಿಸಿದೆ.

ಈ ಹಿಂದೆ ಭಾರತ ಈತನನ್ನು ‘ತಲೆಮರೆಸಿಕೊಂಡ ಆರೋಪಿ‘ ಎಂದು ಘೋಷಿಸಿತ್ತು.

ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ರಾಣಾ(59)ನನ್ನುಬಂಧಿಸಿ, ತಮ್ಮ ದೇಶಕ್ಕೆ ಹಸ್ತಾಂತರಿಸುವಂತೆ ಭಾರತ, ಅಮೆರಿಕವನ್ನು ಕೇಳಿತ್ತು. ಈ ಕಾರಣ ಆತನನ್ನು ಜೂನ್‌ 10ರಂದು ಲಾಸ್‌ ಏಂಜಲೀಸ್‌ನಲ್ಲಿ ಬಂಧಿಸಲಾಗಿತ್ತು. ರಾಣಾ, ಮುಂಬೈ ದಾಳಿ ರೂವಾರಿ ಡೇವಿಡ್ ಕೊಲ್ಮೆನ್ ಹೆಡ್ಲಿಯ ಬಾಲ್ಯ ಸ್ನೇಹಿತ. ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತ ವಿಚಾರಣೆ ಫೆ.12ಕ್ಕೆ ನಿಗದಿಪಡಿಸಲಾಗಿದೆ.

ADVERTISEMENT

ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ರಾಣಾನನ್ನು ಬಂಧನದಿಂದ ಮುಕ್ತಗೊಳಿಸಬೇಕು ಎಂದು ರಾಣಾ ಪರ ವಕೀಲರು ಕೋರಿದ್ದಾರೆ. ಲಾಸ್‌ ಏಂಜಲೀಸ್‌ನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಎದುರು ಅಮೆರಿಕ ಸರ್ಕಾರದ ಅಟಾರ್ನಿ ನಿಕೋಲಾ ಟಿ ಹಾನ್ನಾ ಅವರು ರಾಣಾ ಬಿಡುಗಡೆ ವಿರೋಧಿಸಿ ಗೊತ್ತುವಳಿ ಮಂಡಿಸಿದ್ದಾರೆ.

’ರಾಣಾ ಪರಾರಿಯಾಗುವುದಿಲ್ಲ, ಸಮುದಾಯಕ್ಕೆ ಯಾವುದೇ ರೀತಿಯಲ್ಲೂ ಅಪಾಯ ಎಸಗುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದರೆ ಮಾತ್ರ ವಿಶೇಷ ಸಂದರ್ಭದಲ್ಲಿ ಆತನಿಗೆ ಜಾಮೀನು ನೀಡಬಹುದು‘ ಎಂದು ಅಟಾರ್ನಿ ಹೇಳಿದ್ದಾರೆ.

ಪಾಕಿಸ್ತಾನ-ಅಮೆರಿಕನ್ ಎಲ್‌ಇಟಿ ಭಯೋತ್ಪಾದಕ ಹೆಡ್ಲಿ 2008 ರ ಮುಂಬೈ ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ್ದ. ಈತ ಪೊಲೀಸರ ಎದುರು ತಪ್ಪು ಒಪ್ಪಿಕೊಂಡು, ದಾಳಿಯಲ್ಲಿ ಸಂಚು ರೂಪಿಸಿದ್ದಾಗಿ ಅಮೆರಿಕದಲ್ಲಿ 35 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.