ವಾಷಿಂಗ್ಟನ್: ‘ದೇಶವನ್ನು ಬಾಧಿಸುತ್ತಿರುವ ಕೋವಿಡ್ ಪಿಡುಗನ್ನು ನಿಯಂತ್ರಿಸುವುದೇ ನನ್ನ ಮೊದಲ ಆದ್ಯತೆ’ ಎಂದು ಅಮೆರಿಕದ ಸರ್ಜನ್ ಜನರಲ್ ಹುದ್ದೆಗೆ ನಾಮನಿರ್ದೇಶನಗೊಂಡಿರುವ, ಭಾರತೀಯ ಅಮೆರಿಕನ್ ವೈದ್ಯ ಡಾ.ವಿವೇಕಮೂರ್ತಿ ಹೇಳಿದ್ದಾರೆ.
ಸರ್ಜನ್ ಜನರಲ್ ಹುದ್ದೆಗೆ ಅವರ ನಾಮನಿರ್ದೇಶನವನ್ನು ದೃಢಪಡಿಸುವ ಸಂಬಂಧ ಸೆನೆಟ್ನ ಆರೋಗ್ಯ, ಶಿಕ್ಷಣ, ಕಾರ್ಮಿಕರ ವ್ಯವಹಾರ ಹಾಗೂ ಪಿಂಚಣಿ ಕಮಿಟಿ ಕೈಗೊಂಡಿರುವ ವಿಚಾರಣೆ ಸಂದರ್ಭದಲ್ಲಿ ಅವರು ತಮ್ಮ ಆದ್ಯತೆಗಳ ಕುರಿತು ವಿವರಿಸಿದರು.
‘ಕೋವಿಡ್ಅನ್ನು ನಿಯಂತ್ರಿಸುವುದು ವೈಯಕ್ತಿಕವಾಗಿಯೂ ನನಗೆ ಬಹಳ ಮಹತ್ವದ ವಿಷಯ. ಈ ಮಾರಕ ಸೋಂಕಿಗೆ ನಾನು ನನ್ನ ಕುಟುಂಬದ ಏಳು ಸದಸ್ಯರನ್ನು ಕಳೆದುಕೊಂಡಿದ್ದೇನೆ. ಅದರ ನೋವು ಏನೆಂಬುದು ನನಗೆ ತಿಳಿದಿದೆ’ ಎಂದೂ ಹೇಳಿದರು.
‘ಈ ಪಿಡುಗು ದೇಶವನ್ನು ಹಲವಾರು ರೀತಿಯಲ್ಲಿ ಬಾಧಿಸುತ್ತಿದೆ. ಕೆಲವರು ದೀರ್ಘಾವಧಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಆರ್ಥಿಕವಾಗಿ ಅನೇಕ ಜನರು ನಲುಗಿ ಹೋಗಿದ್ದಾರೆ. ಹೀಗಾಗಿ ಸರ್ಜನ್ ಜನರಲ್ ಆಗಿ ನನ್ನ ನಾಮನಿರ್ದೇಶನ ದೃಢಪಟ್ಟರೆ, ಈ ಸೋಂಕಿನ ನಿರ್ಮೂಲನೆಯೇ ನನ್ನ ಆದ್ಯತೆಯಾಗುವುದು’ ಎಂದು ಪುನರುಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.