ADVERTISEMENT

ಪ್ರೇಮ ಮತ್ತು ಸ್ಮರಣೆ

ಫಕೀರ್ ಮಹಮ್ಮದ ಕಟ್ಪಾಡಿ
Published 16 ಮೇ 2018, 19:30 IST
Last Updated 16 ಮೇ 2018, 19:30 IST

ಪ್ರೇಮದ ಹಾದಿಯಲ್ಲಿ ಪ್ರಥಮ ಹೆಜ್ಜೆ ಸ್ಮರಣೆ ಎನ್ನಲಾಗುತ್ತದೆ. ಸಾಮಾನ್ಯ ಪ್ರೇಮದ ಮುಖ್ಯ ಲಕ್ಷಣವು ಪ್ರಿಯತಮೆಯ ನೆನಪಿನಲ್ಲಿ ಸದಾಕಾಲ ತನ್ಮಯವಾಗಿರುವುದು. ಅಧ್ಯಾತ್ಮ ಪ್ರೇಮದಲ್ಲಿ ಕೂಡ ದೇವರ ಮೇಲಿನ ಪ್ರೇಮದಲ್ಲಿ ಸಾಧಕನ ಹೃದಯದಲ್ಲಿ ದೇವರ ನಾಮಸ್ಮರಣೆಯು ಸದಾಕಾಲ ಅಂಟಿಕೊಂಡು ಅದರ ಸ್ಥಿರವಾದ ವಾಸಸ್ಥಳವಾಗಿಬಿಡುತ್ತದೆ. ಅತ್ತಾರನ ಪ್ರಕಾರ ಸೂಫಿಯೊಬ್ಬ ಪರಿಪೂರ್ಣತೆಯನ್ನು ಸಾಧಿಸುವ ಹಂತಕ್ಕೆ ನಾಲ್ಕು ಲಕ್ಷಣಗಳಿವೆ. ಮೊದಲನೆಯದಾಗಿ ಆತ್ಮವು ಬೆಚ್ಚಗಿನ ಪ್ರೇಮದ ಅನುಭವಪಡೆಯಲು ನಾಲಗೆಯು ಒದ್ದೆಯಾಗಿರಬೇಕು. ಎರಡನೆಯದಾಗಿ ಕಠೋರ ಆತ್ಮನಿಗ್ರಹ ಸಾಧಿಸಿರಬೇಕು. ಮೂರನೆಯದಾಗಿ ಶ್ರದ್ಧಾಭಕ್ತಿ ಇರಬೇಕು. ನಾಲ್ಕನೆಯದಾಗಿ ದೃಢನಿಶ್ಚಯದ ತಣ್ಣಗಿನ ಉಸಿರು ಅದರೊಂದಿಗೆ ಸೇರಿರಬೇಕು. ಈ ನಾಲ್ಕು ಲಕ್ಷಣಗಳು ಪರಿಪೂರ್ಣ ಮನುಷ್ಯನೆನಿಸಲು ಅಗತ್ಯ.

ದ್ಹಿಕ್ರ್ ಅಥವಾ ನಾಮ ಸ್ಮರಣೆಯನ್ನು ಪೈಗಂಬರ್‌ರವರು ತುಂಬ ಹೊಗಳಿದ್ದಾರೆಂದು ಸೂಫಿಗಳು ಹೇಳುತ್ತಾರೆ. "ದೇವರ ನಾಮಸ್ಮರಣೆಯನ್ನು ಕಡೆಗಣಿಸುವವರ ಮಧ್ಯೆ ಅವನ ನಾಮಸ್ಮರಣೆಯನ್ನು ಸದಾಕಾಲ ಮಾಡುತ್ತಿರುವವರೆಂದರೆ, ಯುದ್ಧದಲ್ಲಿ ಪಲಾಯನ ಮಾಡುತ್ತಿರುವವರ ಮಧ್ಯೆ ವೈರಿಗಳನ್ನು ಎದುರಿಸುವ ವೀರಯೋಧನಂತೆ, ಒಣಗಿದ ಮರಗಳ ಮಧ್ಯೆ ಹಸಿರು ನಳನಳಿಸುವ ಆರೋಗ್ಯಕರ ಮರವೊಂದು ಇದ್ದಂತೆ ಎಂಬ ಪ್ರವಾದಿಯವರ ಮಾತುಗಳನ್ನು ಹಜ್ರತ್ ಅಬೂ ಹಮೀದ್ ಅಲ್ ಗಝ್ಝಾಲಿಯವರು ತನ್ನ ಕೃತಿ ‘ಇಹ್ಯಾ ಉಲೂಮ್ ಅದ್ದೀನ್’ನಲ್ಲಿ ಉಲ್ಲೇಖಿಸಿದ್ದಾರೆ. ಪ್ರವಾದಿಯವರ ಈ ಹೇಳಿಕೆಯು ಸೂಫಿ ಅಧ್ಯಾತ್ಮ ಕವಿಗಳಿಗೆ ಅತ್ಯಂತ ಆಕರ್ಷಕವಾಗಿತ್ತು. ಹಜ್ರತ್ ಮೌಲಾನಾ ಜಲಾಲುದ್ದೀನ್ ರೂಮಿ ಮತ್ತು ಯೂನೂಸ್ ಎಮ್ರಿ ಮುಂತಾದ ಟರ್ಕಿಯ ವಿಶ್ವವಿಖ್ಯಾತ ಸೂಫಿ ಕವಿಗಳು ಹಾಗೂ ಭಾರತದ ಮುಸ್ಲಿಂ ಕವಿಗಳು ಹೃದಯವನ್ನು ಹಚ್ಚ ಹಸಿರಾಗಿ ಬೆಳಿದ ಮರಕ್ಕೆ ಹೋಲಿಸುತ್ತಿದ್ದರು.

ದೇವರ ಸನಿಹ ಸಾಗುವ ಸೂಫಿ ಅಧ್ಯಾತ್ಮದ ಹಾದಿಯಲ್ಲಿ ಅವನ ನಾಮಸ್ಮರಣೆಯು ಅತ್ಯಂತ ಪ್ರಮುಖವಾದ ಆಧಾರವಾಗಿದೆ. ಇದರಿಂದಾಗಿ ನಾಮಸ್ಮರಣೆಯು ಸೂಫಿ ಹಾದಿಯ ಪ್ರಥಮ ಹೆಜ್ಜೆ ಎನ್ನಲಾಗುತ್ತದೆ. ಸತತವಾಗಿ ದೇವರ ನಾಮಸ್ಮರಣೆ ಮಾಡದವನು ದೇವರ ‘ವಲಿ ಸ್ನೇಹಿತನಾಗಲಾರ, ದೇವರ ಸಾಮಿಪ್ಯ ಪಡೆಯಲಾರ. ತನ್ನ ನಾಲಗೆಯಲ್ಲಿ ಮತ್ತು ಮನಸ್ಸಿನಲ್ಲಿ ಸದಾ ಅವನ ಸ್ಮರಣೆಯನ್ನು ಮಾಡುತ್ತಿರುವ ಸೂಫಿಯ ಅಧ್ಯಾತ್ಮ ಸಾಧನೆಯ ಪಥವು ಎಷ್ಟೇ ದುರ್ಗಮವಾಗಿದ್ದರೂ, ಎಷ್ಟೇ ಅಪಾಯಗಳು ಎದುರಾದರೂ ಪರಿಪೂರ್ಣವಾಗಿ ಗುರಿಮುಟ್ಟುವುದು ಸಾಧ್ಯವಾಗುತ್ತದೆ. ಜ್ರತ್ ಅಬೂ ಅಲಿ ಅದ್ದಖ್ಖಾಕ್‌ರವರು ‘ದೇವರ ನಾಮಸ್ಮರಣೆಯು ಸಂತತ್ವದ ರಹದಾರಿಯಂತೆ. ಅವನ ನಾಮಸ್ಮರಣೆಯನ್ನು ಮಾಡದೆ ಗುರಿಯನ್ನು ಸಾಧಿಸುತ್ತೇನೆಂದು ಹೊರಟರೆ ಸೋಲೇ ಕಾದಿದೆ ಎಂದು ಹೇಳಿದ್ದಾರೆ. ಸೂಫಿ ಸಂತ ಹಜ್ರತ್ ಅಬೂಬಕ್ಕರ್ ಅಶ್ಶಿಬ್ಲಿ ಅಧ್ಯಾತ್ಮದ ಸಾಧನೆಯ ಹಾದಿಯಲ್ಲಿರುವಾಗ ತನ್ನ ಬೆನ್ನಲ್ಲಿ ಬಾರಕೋಲನ್ನು ಸಿಕ್ಕಿಸಿಕೊಂಡಿರುತ್ತಿದ್ದರಂತೆ. ನಾಮಸ್ಮರಣೆ ಮಾಡಲು ಮರೆತರೆ ನೆನಪಾದಾಗ ಬಾರುಕೋಲಿನಿಂದ ಒಂದೇಸವನೆ ತನ್ನ ದೇಹಕ್ಕೆ ಹೊಡೆದುಕೊಂಡು ಮರೆಗುಳಿತನಕ್ಕೆ ತಾನೇ ಶಿಕ್ಷಿಸಿಕೊಳ್ಳುತ್ತಿದ್ದರಂತೆ!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.