ADVERTISEMENT

ಶ್ರೇಷ್ಠ ಮೌಲ್ಯ - ಶಾಂತಿ

ಡಾ.ಎಂ.ಎ ಜಯಚಂದ್ರ
Published 11 ಜನವರಿ 2018, 19:30 IST
Last Updated 11 ಜನವರಿ 2018, 19:30 IST

ಪ್ರಾಚೀನ ಜೈನ ಕವಿಗಳಲ್ಲಿ ನಾಗಚಂದ್ರನಿಗೆ ವಿಶೇಷ ಸ್ಥಾನ. ಈತ ಮಹಾಕವಿ ಪಂಪನ ಅಭಿಮಾನಿ. ಅಭಿನವ ಪಂಪನೆಂದೇ ಪ್ರಖ್ಯಾತ. ಈತನ ಕಾವ್ಯಗಳು ಎರಡು : ಒಂದು ಮಲ್ಲಿನಾಥ ಪುರಾಣ, ಮತ್ತೊಂದು ರಾಮಚಂದ್ರ ಚರಿತ ಪುರಾಣ. ಎರಡನೆಯದರಲ್ಲಿ ಜೈನ ಪರಂಪರೆಯಲ್ಲಿ ಪ್ರಚಲಿತವಾಗಿದ್ದ ರಾಮನ ಕಥೆ ಬಿತ್ತರಗೊಂಡಿದೆ. ಇದು ಪಂಪರಾಮಾಯಣವೆಂದೇ ಪ್ರಸಿದ್ಧ. ಇಲ್ಲಿಯ ರಾವಣನ ಪಾತ್ರ ಎಲ್ಲ ವಿಮರ್ಶಕರ ಗಮನ ಸೆಳೆದಿದೆ. ಅಲ್ಲದೆ ಆಧುನಿಕ ರಾಮಾಯಣದ ಮೇಲೂ ಪ್ರಭಾವ ಬೀರಿದೆ. ಇಂಥ ಗ್ರಂಥದಲ್ಲಿ ಬರುವ ಒಂದು ಜಿನಸ್ತುತಿ ಹೀಗಿದೆ-

ನಿನಗೆ ರಸಮೊಂದೆ ಶಾಂತಮೆ? ಜಿನೇಂದ್ರ, ಮನಂ ಆ ರಸಾಂಬುಧಿಯೊಳಗೆ ಅವಗಾ-ಹನಂ ಇದರ್ು ಮಿಕ್ಕ ರಸಮಂಕನಸಿನೊಳಂ ನೆನೆಯದಂತು ಮಾಡೆನೆಗೆ ಅಹರ್ ||ಹೇ ಜಿನೇಂದ್ರ, ಕಾವ್ಯದ ನವ ರಸಗಳಲ್ಲಿ ಶಾಂತ ರಸ ಒಂದೇ ನಿನಗೆ ಒಪ್ಪಿತವಾದುದೇ? ಎಲೈ ಅರ್ಹಂತನೇ, ನಿನ್ನಂತೆ ಮಾಡುವ ಶಾಂತರಸವೆಂಬ ಸಮುದ್ರದೊಳಗೆ ನಮ್ಮ ಮನಸ್ಸು ಅವಗಾಹನವಾಗಲಿ (ಮುಳುಗಿರಲಿ). ಆಗ ಉಳಿದೆಲ್ಲ ಅಷ್ಟರಸಗಳು ಅಂದರೆ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಎಂಬ ಎಂಟು ರಸಗಳು ನಮ್ಮ ಕನಸ್ಸಿನಲ್ಲಿಯೂ ನೆನೆಪಿಗೆ ಬಾರದಿರಲಿ. ಈ ಶೃಂಗಾರಾದಿ ರಸಗಳನ್ನು ರಾಗ ಮತ್ತು ದ್ವೇಷ ಎಂಬ ಎರಡು ಗುಂಪುಗಳಲ್ಲಿ ವಿಂಗಡಿಸಬಹುದು. ಈ ರಾಗ-ದ್ವೇಷಗಳು ಎಲ್ಲಿಯವರೆಗೆ ಜೀವನಲ್ಲಿರುವುದೋ ಅಲ್ಲಿಯವರೆಗೆ ಸಂಸಾರ ಚಕ್ರದಲ್ಲಿ ಸುತ್ತಾಟ ಇದ್ದೇ ಇರುವುದು. ಈ ಚಕ್ರದಿಂದ ಮುಕ್ತನಾಗಬೇಕಾದರೆ, ನಮ್ಮ ಮನಸ್ಸು ಶಾಂತ ರಸದಲ್ಲೇ ತಲ್ಲೀನ ಆಗಬೇಕು. ಅವನೇ ವೀತರಾಗಿ, ಅವನೇ ಜಿನ. ಮೇಲಿನ ಜಿನಸ್ತುತಿಯ ಆಶಯದಂತೆ ಜೈನರು ಶಾಂತಿಯ ಆರಾಧಕರು. ಅವರಿಗೆ ಶಾಂತಿಯೇ

ಒಂದು ಶ್ರೇಷ್ಠ ಮೌಲ್ಯ. ಇದಕ್ಕಾಗಿಯೇ ಪಂಚ ಅಣುವ್ರತ, ಮಹಾವ್ರತ ಮೊದಲಾದವುಗಳಿವೆ. ಇಂದಿನ ಮಾನವನ ಉನ್ನತಿಗೆ, ಸೌಹಾರ್ದಕ್ಕೆ ಅಗತ್ಯವಾದ ಇಂಥ ಮೌಲ್ಯಗಳು ಕನ್ನಡ ಜೈನ ಸಾಹಿತ್ಯದಲ್ಲಿ ಹೇರಳವಾಗಿ ದೊರೆಯುತ್ತವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.