ADVERTISEMENT

ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST

5-5-2013ರ `ಸಾಹಿತ್ಯ ಪುರವಣಿ' ಪ್ರತಿ ಸಲದಂತೆ ಸಾಹಿತ್ಯ ಆಸಕ್ತ ಓದುಗರಿಗೆ ಉತ್ತಮ ಮಾರ್ಗದರ್ಶಿಯಾದೆ. ಕವಿ ಗೋಪಾಲಕೃಷ್ಣ ಅಡಿಗರು, ನವ್ಯದ ಕಡೆ ಹೆಜ್ಜೆ ಹಾಕಿದ್ದನ್ನು ನೆನಸಿಕೊಂಡು ಮುನ್ನಡೆದಾಗ ಹಿರಿಯ ಸಾಹಿತಿಗಳಲ್ಲಿ ಕೂಡ ಅತೃಪ್ತಿ ಕಂಡು ಬಂದು, ನವ್ಯದ ಕಡೆಗೆ ವಾಲಿ ಸೈ ಎನಿಸಿಕೊಂಡಿದ್ದು ಮರೆಯಲಿಕ್ಕಾಗದು. ಈ ಕುರಿತ ವಿಶ್ಲೇಷಣೆಯನ್ನು ಶೂದ್ರ ಶ್ರೀನಿವಾಸ್ ತಮ್ಮ `ನವ್ಯ ಸಾಹಿತ್ಯ: ಭೂತದಿಂದ ವರ್ತಮಾನದವರೆಗೂ' ಲೇಖನದಲ್ಲಿ ಮಾಡಿದ್ದಾರೆ. ಎಚ್.ಎಸ್. ಶಿವಪ್ರಕಾಶರ `ಮರುಳ ಶಂಕರ ದೇವ' ಕವನದ ಉತ್ತಮ ವಿಶ್ಲೇಷಣೆಯನ್ನು ಬಿದರಹಳ್ಳಿ ನರಸಿಂಹಮೂರ್ತಿ ಮಾಡಿದ್ದಾರೆ.
- ಬಿ. ಎನ್. ಸೊಲ್ಲಾಪುರೆ, ಕಮಲನಗರ, ಬೀದರ್ ಜಿಲ್ಲೆ

`ಅಭಿವ್ಯಕ್ತಿಯ ಅಡೆ ತಡೆ' ಕುರಿತು ರೂಪಾ ಹಾಸನ ಬಹಳ ಸೊಗಸಾಗಿ, ವಿಸ್ತೃತವಾಗಿ ಚರ್ಚಿಸಿದ್ದಾರೆ. ಆದರೆ ವಾಸ್ತವವಾಗಿ ಅಡೆ ತಡೆ ಎಂಬ ವಿಚಾರ ಪುರುಷ ಬರಹಗಾರರಿಗೂ ಕಾಡದಿರದು ಎನ್ನುವುದನ್ನು ಅವರು ಗೌಣವಾಗಿಸಿದ್ದಾರೆ. ಹಾಗಾಗಿ ವಿಮರ್ಶೆಯ ಚೌಕಟ್ಟಿನಲ್ಲಿ ಮಹಿಳೆ ಅಥವಾ ಪುರುಷ ಎಂಬ ಭೇದ ಭಾವ ಸಾಧುವಲ್ಲ. ಏಕೆಂದರೆ ಕಾಲ ಮತ್ತು ಸಾಹಿತ್ಯದ ಜೊತೆಗೆ ಸಮಾಜ, ಭಾಷೆ ಕೂಡ ನಿಂತ ನೀರಲ್ಲ. ಒಂದು ವೇಳೆ ಹಾಗೆ ಆದರೆ ಅದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಟ್ಟಿನಲ್ಲಿ ಬರಹಗಾರನಲ್ಲಿ ಮೌಲ್ಯಗಳ ಬಗೆಗಿನ ಕಾಳಜಿ ಮುಖ್ಯವಾಗಬೇಕಾದ ಜರೂರು ಹಿಂದೆಂದಿಗಿಂತ ಈಗ ಹೆಚ್ಚಾಗಿದೆ.
- ಚನ್ನಬಸವ ಪುತ್ತೂರ್ಕರ, ಚಿತ್ರದುರ್ಗ

ಪ್ರತಿ ತಿಂಗಳ ಮೊದಲ ರವಿವಾರದಂದು ಪ್ರಕಟವಾಗುವ `ಸಾಹಿತ್ಯ ಪುರವಣಿ'ಯನ್ನು ಆಸಕ್ತಿಯಿಂದ ಓದುತ್ತಿದ್ದೇನೆ. ಮೇ ತಿಂಗಳ ಸಂಚಿಕೆಯಲ್ಲಿ ಪ್ರಕಟವಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಲೇಖನ `ರಾಜಕೀಯ ಅಧಿಕಾರದ ದಾಹ ಭಾವಜಗತ್ತಿನ ನಾಶ' ಚಿಂತನಾರ್ಹವಾಗಿತ್ತು. ಪಂಪನ ಸಾಹಿತ್ಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಬರೆದ ಲೇಖನ ಪರಿಣಾಮಕಾರಿ. `ಬರೆಯುವುದೆಂದರೆ ಧ್ಯಾನ, ಓದುವುದೆಂದರೆ ಯೋಗಾಭ್ಯಾಸ' ಕುಂ. ವೀರಭದ್ರಪ್ಪನವರ ಜೊತೆಗಿನ ಸಂದೀಪ ನಾಯಕ ಅವರ ಸಂದರ್ಶನ  ಅವರ ಸಾಹಿತ್ಯ ಜೀವನವನ್ನು, ಅದರ ಒಳನೋಟಗಳನ್ನು ಪರಿಚಯಿಸಿತು.
- ಮಲ್ಲಪ್ಪ ತೊದಲಬಾಗಿ, ಬಬಲೇಶ್ವರ, ವಿಜಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.