ADVERTISEMENT

ನೆಹರೂ ರಾಷ್ಟ್ರೀಯವಾದವೂ ನಮ್ಮ ವೀರಾಭಿಮಾನವೂ

ರಾಮಚಂದ್ರ ಗುಹಾ
Published 14 ನವೆಂಬರ್ 2013, 19:30 IST
Last Updated 14 ನವೆಂಬರ್ 2013, 19:30 IST

ಚಿಕ್ಕಂದಿನಲ್ಲಿ ನಾನು ಓದಿದ ಪುಸ್ತಕಗಳಲ್ಲಿ ಪರ್ವತಾರೋಹಿ ತೇನ್‌ಸಿಂಗ್ ನೊರ್ಗೆಯ ಆತ್ಮಕತೆಯೂ ಒಂದು. ನಾನು ಬೆಳೆದದ್ದು ಡೆಹ್ರಾಡೂನ್‌ನಲ್ಲಿ. ಹಿಮಾಲಯದ ಬುಡಭಾಗ ಕಣ್ಣುಕೋರೈಸುವಂತೆ ಕಾಣುವ ಸ್ಥಳದಲ್ಲಿ ನಮ್ಮ ಮನೆ ಇತ್ತು. ಹತ್ತಿರದಲ್ಲೇ ಇದ್ದ ಮಸ್ಸೂರಿ ಬೆಟ್ಟತಪ್ಪಲಿಗೆ ಆಗಾಗ ಹೋಗು­ತ್ತಿದ್ದೆವು. ಅಲ್ಲಿಂದ ನಂದಾದೇವಿ, ತ್ರಿಶೂಲ್, ಬಾಂದರ್ ಪೂಂಚ್ ಸ್ಪಷ್ಟವಾಗಿ ಕಾಣುತ್ತಿದ್ದವು. ಬಾಲ್ಯದಲ್ಲಿ ನನಗೆ ಆಸ್ತಮಾ ಇದ್ದಿದ್ದರಿಂದ ಪರ್ವತಾ­ರೋಹಣ ಸಾಧ್ಯವಿರ­ಲಿಲ್ಲ. ಬಹುಶಃ ಅದಕ್ಕೇ ನಾನು ತೇನ್‌ಸಿಂಗ್ ಆತ್ಮಕತೆಯನ್ನು ಪದೇಪದೇ ಮೆಲುಕು ಹಾಕುವುದು.

ಆ ಪುಸ್ತಕದಲ್ಲಿನ ಎರಡು ಕಂತುಗಳು ನನ್ನ ಮನದಲ್ಲಿ ಬಲವಾಗಿ ನಿಂತುಬಿಟ್ಟಿವೆ. ಎಡ್ಮಂಡ್ ಹಿಲರಿ ಎವರೆಸ್ಟ್ ಮೇಲೆ ಮೊದಲು ಕಾಲಿಟ್ಟದ್ದು ತಾನು, ತೇನ್‌ಸಿಂಗ್ ಅಲ್ಲ ಎಂದು ಹೇಳಿದ್ದನ್ನು ಖುದ್ದು ನೊರ್ಗೆ ನೆನಪಿಸಿಕೊಳ್ಳುವ ಪ್ರಸಂಗ ಅವುಗಳಲ್ಲಿ ಒಂದು.

ನ್ಯೂಜಿಲೆಂಡ್‌ನ ಹಿಲರಿ ತನ್ನ ಆತ್ಮಪ್ರಶಂಸೆಯನ್ನು ಅಷ್ಟಕ್ಕೇ ನಿಲ್ಲಿಸದೆ ಪರ್ವತಾರೋಹಣದ ಕೊನೆಯ ಹಂತದಲ್ಲಿ ಶೆರ್ಪಾ­ನನ್ನು ತಾನೇ ಹಿಡಿದು ಎಳೆದೊಯ್ಯ­ಬೇಕಾ ಯಿತು ಎಂದೂ ಹೇಳಿಕೊಂಡಿದ್ದ. ತನ್ನ ಪರ್ವ­ತಾರೋಹಿ ಸ್ನೇಹಿತ ರೇಮಂಡ್ ಲ್ಯಾಂಬ­ಟರ್್ ಸ್ನೇಹಶೀಲ ಎಂದು ತೇನ್‌ಸಿಂಗ್ ಹೇಳಿ­ದ್ದನ್ನೂ ನಾನು ಮರೆಯಲು ಸಾಧ್ಯವಿಲ್ಲ. ಹಿಲರಿಗೆ ಇದ್ದ ಸೊಕ್ಕಿನ ಧೋರಣೆಗೆ ವ್ಯತಿರಿಕ್ತವಾದ ಅಭಿಪ್ರಾಯವಿದು.

ನನಗೆ ನೆನಪಿರುವ ಇನ್ನೊಂದು ಕಥೆ ತೇನ್‌ಸಿಂಗ್‌ನ ರಾಷ್ಟ್ರೀಯತೆ ಕುರಿತು ಹೊಮ್ಮಿದ ಪ್ರಶ್ನೆಯ ಸುತ್ತ ಸುತ್ತಿಕೊಂಡಂಥದ್ದು. 1953ರ ಬೇಸಿಗೆಗೆ ಮೊದಲು ತೇನ್‌ಸಿಂಗ್ ತಂದೆ, ಗಂಡ, ಪರ್ವತಾರೋಹಿ ಇವಿಷ್ಟೇ ಆಗಿದ್ದ. ಒಮ್ಮೆ ಎವರೆಸ್ಟ್ ಏರಿದ್ದೇ, ನಾಲ್ಕು ದೇಶಗಳಿಗೆ ಅವನ ಅಗ್ಗಳಿಕೆಯಲ್ಲಿ ಪಾಲು ಬೇಕಾಯಿತು. ತನ್ನ ಬದುಕಿನ ಮೊದಲ ದಿನಗಳನ್ನು ತೇನ್‌ಸಿಂಗ್ ನೇಪಾಳದಲ್ಲಿ ಕಳೆದಿದ್ದ. ಹಾಗಾಗಿ ನೇಪಾಳೀ­ಯರು ಅವನು ತಮ್ಮವನು ಎಂದರು.

ಡಾರ್ಜಿ­ಲಿಂಗ್‌ನಲ್ಲಿ ಅವನು ನೆಲೆಸಿದ್ದರಿಂದ ಭಾರತೀ­ಯರು ‘ಇವ ನಮ್ಮವ’ ಎನ್ನತೊಡ­ಗಿದರು. ಅವನು ಬೌದ್ಧ ಧರ್ಮದ ಲಾಸಾ ಅಧ್ಯಾತ್ಮವನ್ನು ಒಪ್ಪಿಕೊಂಡವನು. ಆದ್ದರಿಂದ  ಟಿಬೆಟಿಯನ್ನರು ಅವನು ತಮ್ಮವ ಎಂದು ಇನ್ನೊಂದು ದನಿ ತೇಲಿಬಿಟ್ಟರು. ಟಿಬೆಟ್, ಆ ಕಾಲಘಟ್ಟದಲ್ಲಿ ಚೀನಾದ ಬೀಜಿಂಗ್ ವ್ಯಾಪ್ತಿಗೆ ಸೇರಿದ್ದ ಪ್ರಾಂತ್ಯ­ವಾಗಿತ್ತು. ಹಾಗಾಗಿ ಎವರೆಸ್ಟ್ ಏರಿದ ಮೊದಲಿಗ ಚೀನಾದವನೇ ಹೌದು ಎಂದು ಆ ದೇಶ ವಾದಿಸಿತು.

ತನ್ನ ರಾಷ್ಟ್ರೀಯತೆ ಕುರಿತ ಪ್ರಶ್ನೆ ಕೇಳಿ ತೇನ್‌ಸಿಂಗ್ ಕಕ್ಕಾಬಿಕ್ಕಿಯಾದ. ತಾನೊಬ್ಬ ಶೆರ್ಪಾ ಎಂದಷ್ಟೇ ಭಾವಿಸಿದ್ದ ಅವನಿಗೆ ತಾನು ನೇಪಾಳಿಯೋ, ಭಾರತೀಯನೋ, ಟಿಬೆಟಿ­ಯನ್ನೋ ಅಥವಾ ಚೀನೀಯನೋ ಎಂದಾಗ ಗಾಬರಿಯಾಗದೇ ಇದ್ದೀತೆ?

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಜವಾಹರಲಾಲ್ ನೆಹರೂ ಬರೆದ ಪತ್ರಗಳನ್ನು (ಜವಾಹರಲಾಲ್ ನೆಹರೂ ಅವರ ‘ಲೆಟರ್ಸ್ ಟು ಚೀಫ್ ಮಿನಿಸ್ಟರ್ಸ್’) ಓದುತ್ತಿದ್ದಾಗ ನನಗೆ ತೇನ್‌ಸಿಂಗ್ ಆತ್ಮಕತೆ ನೆನಪಾಯಿತು. ಪ್ರಧಾನಿ­ಯಾಗಿದ್ದಾಗ ನೆಹರೂ ಹದಿನೈದು ದಿನಗಳಿ­ಗೊಮ್ಮೆ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆ ಯುತ್ತಿದ್ದರು. ಸರ್ಕಾರದ ವಿವಿಧ ಯೋಜನೆಗಳ ಕುರಿತು ತಮ್ಮ ದೃಷ್ಟಿಕೋನವೇನು ಎಂಬುದನ್ನು ಯೋಜನೆಗಳು ಅನ್ವಯವಾಗುತ್ತಿದ್ದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ತಿಳಿಸುವುದು ಆ ಪತ್ರ ಬರಹದ ಉದ್ದೇಶವಾಗಿತ್ತು. ಸಂಶೋಧಕ, ರಾಯ­ಭಾರಿ ಜಿ.ಪಾರ್ಥಸಾರಥಿ 1980ರಲ್ಲಿ ಆ ಪತ್ರಗಳನ್ನೆಲ್ಲಾ ಸಂಪಾದಿಸಿ ಕೃತಿರೂಪದಲ್ಲಿ ಪ್ರಕಟಿಸಿದರು. ಈಗ ಇತಿಹಾಸಕಾರರಿಗೆ ಅದು ಪ್ರಮುಖ ಅಧ್ಯಯನ ಆಕರ.

ಜುಲೈ 2, 1953ರಲ್ಲಿ ಮುಖ್ಯಮಂತ್ರಿಗಳಿಗೆ ನೆಹರೂ ಬರೆದ ಪತ್ರ ಹೀಗಿದೆ:
‘ಎವರೆಸ್ಟ್ ಪರ್ವತವನ್ನು ಕೊನೆಗೂ ಏರಿದ ಸಾಧನೆ ನಾವೆಲ್ಲಾ ಹೆಮ್ಮೆ ಪಡುವಂಥದ್ದು. ಈಗಲೂ ಸಂಕುಚಿತ ಮನಸ್ಸಿನ ಕೆಲವು ಕ್ಷುಲ್ಲಕ ಜನರು ಸಣ್ಣತನದ ರಾಷ್ಟ್ರೀಯವಾದ ಬಿಂಬಿಸುತ್ತಿ­ದ್ದಾರೆ. ಎವರೆಸ್ಟನ್ನು ಮೊದಲು ತೇನ್‌ಸಿಂಗ್ ಏರಿದ್ದೋ, ಹಿಲರಿಯೋ ಎಂಬ ವಿವಾದ ಮೊದಲು ಎದ್ದಿತು.

ಆಮೇಲೆ ತೇನ್‌ಸಿಂಗ್ ಭಾರತೀ­ಯನೋ ನೇಪಾಳೀಯನೋ ಎಂಬ ಪ್ರಶ್ನೆ. ಈ ವಿವಾದಗಳು ನನ್ನಲ್ಲಿ ಸೋಜಿಗ ಮೂಡಿಸಿದ್ದೇ ಅಲ್ಲದೆ ಕೆಲವರು ವೃಥಾ ಉದ್ರಿಕ್ತರಾಗಿ ಪ್ರತಿಕ್ರಿಯಿಸುತ್ತಿರುವುದು ವಿಷಾ ದದ ವಿಷಯ. ತೇನ್‌ಸಿಂಗ್ ಮೊದಲು ಪರ್ವತ ಹತ್ತಿದನೋ, ಹಿಲರಿ ಹತ್ತಿದನೋ ಎಂಬುದರಲ್ಲಿ ಅಂಥ ವ್ಯತ್ಯಾಸವೇನೂ ಇಲ್ಲ. ಇಬ್ಬರಲ್ಲಿ ಯಾರೂ ಇನ್ನೊಬ್ಬರ ಸಹಾಯವಿಲ್ಲದೆ ಈ ಸಾಧನೆ ಮಾಡಿರುವುದಿಲ್ಲ. ಅಷ್ಟೇ ಅಲ್ಲ, ಇಡೀ ತಂಡದವರ ಬೆಂಬಲ ಇಲ್ಲದೆ ಇಬ್ಬರಲ್ಲಿ ಯಾರೂ ಅಷ್ಟೆತ್ತರ ಏರಿರುವುದಿಲ್ಲ.

ಈ ವಿಚಾರ­ದಲ್ಲಿ ನಾನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಯೋಚಿಸುತ್ತೇನೆ. ಪರ್ವತ ಹತ್ತ­ಬೇಕೆಂದು ಈಗಾಗಲೇ ಯತ್ನಿಸದ ಹಲವರ ಅನು ಭವಗಳು ತೇನ್‌ಸಿಂಗ್ ಹಾಗೂ ಹಿಲರಿ ಇದ್ದ ತಂಡದವರ ನೆರವಿಗೆ ಬಂದಿರುತ್ತವೆ. ಮಹತ್ವದ ಸಾಧನೆಗಳೆಲ್ಲವೂ ಹಲವರ ಸಾಂಘಿಕ ಪ್ರಯತ್ನದ ಫಲಿತವೇ ಆಗಿರುತ್ತವೆ.

ಕೊನೆಯ ಮೆಟ್ಟಿಲನ್ನು ಒಬ್ಬನಷ್ಟೇ ಏರಿದರೂ ಅವನ ಜೊತೆ ಹಲವು ಮೆಟ್ಟಿಲು­ಗಳವರೆಗೆ ಹೆಜ್ಜೆ ಹಾಕಿದವರನ್ನು ಮರೆ ಯ­ಲಾಗದು. ಇಂಥ ವಿಷಯಗಳಲ್ಲಿ ಸಣ್ಣತನದ, ವ್ಯಸನದ ರಾಷ್ಟ್ರೀಯವಾದ ಬಿಂಬಿಸಿದರೆ ಅದು ಬರೀ ತೋರಿಕೆಯ ದೇಶಭಕ್ತಿಯಾಗುತ್ತದೆ. ಒಂದು ವಿಧದಲ್ಲಿ ಅದು ನಮ್ಮ ಕೀಳರಿಮೆಯೂ ಹೌದು.

ಐಸಾಕ್ ನ್ಯೂಟನ್ ತಾನು ದೊಡ್ಡ ಮನು­ಷ್ಯರ ಭುಜದ ಮೇಲೆ ನಿಂತಿದ್ದರಿಂದ ಇನ್ನಷ್ಟು ದೂರದ್ದನ್ನು ನೋಡಲು ಸಾಧ್ಯ­ವಾಯಿತು ಎಂದಿದ್ದನಂತೆ. ಮನುಷ್ಯನ ಹೊಸ ಅಥವಾ ಸೃಜನಶೀಲ ಸಾಧನೆಗಳೆಲ್ಲವೂ ಹಿಂದಿನ ತಲೆ­ಮಾರಿನ ಜನರ ಸಂಯಮದ ಕ್ರಿಯೆಯ ಮೇಲೆಯೇ ಸಾಕಾರಗೊಳ್ಳುತ್ತವೆ. ಬೆರಗು ಮೂಡಿ­ಸುವ ವೈಯಕ್ತಿಕ ಸಾಧನೆಗಳ ಹಿಂದೆ ಇರುವ ಸಾಂಘಿಕ ಯತ್ನವನ್ನು ಅಲ್ಲಗಳೆಯ­ಲಾಗದು. ನೆಹರೂ ಉಲ್ಲೇಖಿಸಿದಂತೆ, ತೇನ್‌ ಸಿಂಗ್ ಆಗಲೀ ಹಿಲರಿ ಆಗಲೀ ಎವರೆಸ್ಟ್ ತುತ್ತ­ತುದಿಯನ್ನು ಹಲವರ ನೆರವಿಲ್ಲದೆ ಏರಲು ಸಾಧ್ಯವಿರಲಿಲ್ಲ.

ಎವರೆಸ್ಟ್ ಏರಿದ ಸಾಧನೆಯ ಕುರಿತು ನೆಹರೂ ಮಾಡಿದ ವಿಶ್ಲೇಷಣೆಯನ್ನು ಅವರದ್ದೇ ಪ್ರಮುಖ ಸಾಧನೆಯಾದ ಪ್ರಜಾಪ್ರಭುತ್ವ ಭಾರತ ನಿರ್ಮಾಣಕ್ಕೂ ಅನ್ವಯಿಸಬಹುದು. ಆ ಕೆಲಸದಲ್ಲಿ ಅವರ ಸಮಕ್ಕೂ ಕೆಲಸ ಮಾಡಿದ ವರು ವಲ್ಲಭಭಾಯಿ ಪಟೇಲ್.

ಇಂದು ನಂಜಿನ, ವಿಭಜಿಸಿ ಆಳುವ ರಾಜಕೀಯದಲ್ಲಿ ತೊಡಗಿರುವ ಯಾರೂ ಆಧುನಿಕ ಭಾರತದ ಸರ್ಕಾರ ವ್ಯವಸ್ಥೆ-­ಯನ್ನು ರೂಪಿಸಿದ ಒಬ್ಬರನ್ನೂ ಸ್ಮರಿಸುವುದಿಲ್ಲ. ಕಾಂಗ್ರೆಸ್ ಪಕ್ಷ ನೆಹರೂ ಅವರನ್ನು ನೆನಪಿನ ಲ್ಲಿಟ್ಟುಕೊಂಡು, ಪಟೇಲರನ್ನು ಮರೆತಿದೆ. ಇದ ರಿಂದ ಭಾರತೀಯ ಜನತಾ ಪಕ್ಷಕ್ಕೆ ಪಟೇಲರು ತಮ್ಮವರು ಎಂದು ಹೇಳಿಕೊಳ್ಳುವ ಅವಕಾಶ ಸಿಕ್ಕಿತು. ದೇಶದ ಹಣೆಬರಹ ಬದಲಿಸುವುದರಲ್ಲಿ ನೆಹರೂ ಅವರಿಗಿಂತ ದೊಡ್ಡ ಪಾತ್ರ ಪಟೇಲ ರದ್ದು ಎಂದು ಹೇಳಿಕೊಳ್ಳುವಷ್ಟರ ಮಟ್ಟಿಗೆ ಈ ಅವಕಾಶವನ್ನು ಬಿಜೆಪಿ ಉಪಯೋಗಿ­ಸಿಕೊಳ್ಳುತ್ತಿದೆ.

ವಾಸ್ತವದಲ್ಲಿ, ನೆಹರೂ ಹಾಗೂ ಪಟೇಲರ ಹೊಂದಾಣಿಕೆ ಅದ್ಭುತವಾಗಿತ್ತು. ಧಾರ್ಮಿಕ ಹಾಗೂ ಭಾಷಿಕ ಬಹುತ್ವವನ್ನು ಒಪ್ಪಿಕೊಂಡು, ಚುನಾವಣಾ ಪ್ರಜಾಪ್ರಭುತ್ವಕ್ಕೆ ನೆಹರೂ ಬದ್ಧರಾ­ಗುವಂಥ ನಿರ್ಧಾರ ತೆಗೆದುಕೊಳ್ಳದೇ ಹೋಗಿದ್ದರೆ ಭಾರತ ಕೋಮುಗಲಭೆಗಳಿಂದ ನಲುಗಿರುತ್ತಿತ್ತು. ರಾಜಾಡಳಿತದ ರಾಜ್ಯಗಳನ್ನು ಒಗ್ಗೂಡಿಸಿದ್ದೇ ಅಲ್ಲದೆ, ಸಂವಿಧಾನದ ಕರಡು ಸಿದ್ಧಪಡಿಸುವಲ್ಲಿ ಪಟೇಲರು ವಿವೇಚನೆಯಿಂದ ತೊಡಗಿ­ಕೊಂಡದ್ದನ್ನೂ ಮರೆಯಲಾಗದು.

ನವೆಂಬರ್ 1949ರಲ್ಲಿ ಪ್ರಕಟವಾದ ಲೇಖನ­ವೊಂದರಲ್ಲಿ ತಮ್ಮ ಹಾಗೂ ನೆಹರೂ ನಡುವಿನ ಸಂಬಂಧವನ್ನು ಕೆಲವರು ಹೇಗೆ ತಪ್ಪಾಗಿ ವ್ಯಕ್ತ­ಪಡಿ­ಸುತ್ತಿದ್ದಾರೆ ಎಂದು ಪಟೇಲರು ಬರೆದಿದ್ದರು. ‘ಸ್ವಹಿತಾಸಕ್ತಿ ಇರುವ ಭೋಳೆಸ್ವ­ಭಾವದ ಕೆಲವರು ಹೇಳುತ್ತಿರುವುದಕ್ಕೆ ವಿರುದ್ಧ­ವಾಗಿ ನನ್ನ, ನೆಹರೂ ಸಂಬಂಧವಿದೆ. ನಾವು ಬದುಕಿನುದ್ದಕ್ಕೂ ಸ್ನೇಹಿತರಾಗಿ, ಸಹೋದ್ಯೋಗಿ­ಗಳಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಆಡಳಿತ ಹಾಗೂ ಸಾಂಸ್ಥಿಕ ಸಲಹೆಗಳನ್ನು ನಾನು ಕೊಟ್ಟಾಗ ಅವರು ಮುಕ್ತ ಮನಸ್ಸಿನಿಂದ ಸ್ವೀಕರಿ­ಸಿದ್ದಾರೆ’ ಎಂಬ ಸಾಲುಗಳು ಪಟೇಲರ ಬರಹದಲ್ಲಿವೆ.

ನೆಹರೂ ಹಾಗೂ ಪಟೇಲರ ನಡುವಿನ ಸಂಬಂಧ ಸರಿಯಾಗಿ ಇಲ್ಲದೇ ಇದ್ದರೆ ಭಾರತ ಸ್ವಾತಂತ್ರ್ಯಾ ನಂತರ ಕುಸಿದುಹೋಗುತ್ತಿತ್ತು. ಪ್ರಾದೇಶಿಕ ಏಕತೆ, ಬಹುತ್ವ ಸಾಮಾಜಿಕ ಸಿದ್ಧಾಂತ, ಚುನಾವಣಾ ಪ್ರಜಾಪ್ರಭುತ್ವ ಇವು ಸಾಧ್ಯವಾದದ್ದು ಇಬ್ಬರ ನಡುವಿನ ಹೊಂದಾಣಿಕೆ­ಯಿಂದ. ಇಬ್ಬರೂ ತಾವು ರಾಜಕೀಯಕ್ಕೆ ಕಾಲಿಟ್ಟಾಗ ಇದ್ದ ಮೊದಲ ಮಂತ್ರಿಮಂಡಲದ ಸಹೋದ್ಯೋಗಿಗಳ ಮೇಲೂ ಅವಲಂಬಿತರಾ­ಗಿದ್ದರು. ಈ ಪೈಕಿ ವಿಶೇಷವಾಗಿ ಕಾಣಿಸುವುದು ಬಿ.ಆರ್. ಅಂಬೇಡ್ಕರ್ ಹೆಸರು. ಸ್ವಾತಂತ್ರ್ಯಾ ನಂತರದ ಮೊದಲ ತಲೆಮಾರಿನ ನಾಯಕರು ಮುಂದಿನ ಹಲವು ತಲೆಮಾರಿನ ದೇಶಭಕ್ತ, ಸಾಮಾಜಿಕ ಕಳಕಳಿಯ ನಾಯಕರಿಗೆ ಭುಜ ಒಡ್ಡಿದ್ದಾರೆ.

ಕಾಂಗ್ರೆಸ್ ಪಕ್ಷದ ಮೊದಲ ‘ಕುಟುಂಬ’ ನೆಹರೂ ಖ್ಯಾತಿಗೆ ದೊಡ್ಡ ಮಟ್ಟದ ಹಾನಿ ಮಾಡಿತು. ಹಾಗೆ ನೋಡಿದರೆ ಆ ಪಕ್ಷ ಅವರ ಹೆಸರನ್ನು ಸಮಂಜಸವಾಗಿ ಅಥವಾ ಯುಕ್ತವಾಗಿ ಬಳಸಿದ್ದು ಕಡಿಮೆಯೇ. ಎಲ್ಲಾ ಪಕ್ಷಗಳಿಗೂ ಸಲ್ಲುವಂಥ ಹಲವು ಚಿಂತನೆಗಳನ್ನು ನೆಹರೂ ಹೊರಹಾಕಿದ್ದರು. ಅವನ್ನು ಕಾಂಗ್ರೆಸ್‌ ಹಂಚಿ ಕೊಂಡಿದ್ದು ತೀರಾ ವಿರಳ. ರಾಷ್ಟ್ರೀಯತೆ­ಯನ್ನು ಒಬ್ಬ ವ್ಯಕ್ತಿಯ ಸಂಸ್ಕೃತಿ, ಧರ್ಮ, ಪಕ್ಷ ಅಥವಾ ದೇಶಕ್ಕೆ ಸೀಮಿತಗೊಳಿಸುವಂಥ ಕುರುಡು ಚಿಂತನೆ ಯನ್ನು ನೆಹರೂ ಎಂದೂ ಮಂಡಿಸಿರಲಿಲ್ಲ.

ಎವರೆಸ್ಟ್ ಶಿಖರಾರೋಹಣದ ಹೆಮ್ಮೆಯ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿ­ಗಳಿಗೆ ಪತ್ರ ಬರೆದ ಆರು ತಿಂಗಳ ನಂತರ ಅವರು ದೇಶದ ವಿಷಯದಲ್ಲಿ ವೀರಾಭಿಮಾನ ಸಲ್ಲದು ಎಂಬ ಧ್ವನಿ ಇರುವ ಇನ್ನೊಂದು ಪತ್ರವನ್ನು ಬರೆದರು.

ಅದು ಹೀಗಿದೆ:
‘ಬೇರೆಯವರು ಹೊಗಳುತ್ತಾರೆ ಎಂಬ ಕಾರಣಕ್ಕೆ ನನ್ನದೇ ದೇಶವನ್ನು ಕೊಂಡಾಡುವ ಆಟದಲ್ಲಿ ಭಾಗಿಯಾಗುವುದು ನನಗಿಷ್ಟವಿಲ್ಲ. ಪ್ರತಿ ದೇಶಕ್ಕೂ ಅಂಥ ಭಾವನೆ ಇತ್ತು. ಇತರರಿಗೆ ಉಪದೇಶಿಸುವಂಥದ್ದು ಭಾರತಕ್ಕೆ ಏನೂ ಇಲ್ಲ.

ಇತರರಿಂದ ಏನನ್ನೋ ಪಡೆದುಕೊಂಡು ನಾವು ಉದ್ಧಾರವಾಗುವ ಅಥವಾ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಅಗತ್ಯವೂ ಇಲ್ಲ. ಭಾರತಕ್ಕೆ ಒಂದು ವ್ಯಕ್ತಿತ್ವವಿದೆ, ಅದರದ್ದೇ ಆದ ವಿಶಿಷ್ಟ ಸಾಮರ್ಥ್ಯವಿದೆ.  ಪ್ರತಿ ದೇಶಕ್ಕೂ ಕೊಡುವ, ಪಡೆಯುವ ಗುಣ ಇದ್ದೇ ಇರುತ್ತದೆ’.

ನೆಹರೂ ಅಧಿಕಾರಾವಧಿಯಲ್ಲಿ ಇರುವಷ್ಟೂ ಕಾಲ ಸಂಕುಚಿತ ರಾಷ್ಟ್ರೀಯತೆಯನ್ನು ವಿರೋಧಿ­ಸುತ್ತಲೇ ಇದ್ದರು. 1932, ಡಿಸೆಂಬರ್‌ 14ರಂದು ಜೈಲಿನಿಂದ ಅವರು ತಮ್ಮ ಮಗಳು ಇಂದಿರಾ ಗಾಂಧಿಗೆ ಹೀಗೆ ಬರೆದರು:

‘ರಾಷ್ಟ್ರೀಯವಾದ ಎಂಬುದು ಅದರ ಪಾಡಿಗೆ ಅದು ಇದ್ದರೆ ಒಳ್ಳೆಯದು. ಆದರೆ ಅದು ನಂಬಲು ಸಾಧ್ಯವಿಲ್ಲದ ಸ್ನೇಹಿತನಂತೆ, ಅಸುರಕ್ಷಿತ ಇತಿಹಾಸಕಾರನಂತೆ. ಹಾಗಾಗಿ ಆ ವಿಷಯದಲ್ಲಿ ಭಾರತದ ಇತ್ತೀಚಿನ ಇತಿಹಾಸವನ್ನು ಪರಿಗಣಿಸು ವಾಗ ಎಚ್ಚರಿಕೆಯಿಂದ ಇರಬೇಕು. ಅದಿಲ್ಲದೇ ಹೋದರೆ ಎಲ್ಲ ಅನಿಷ್ಟಕ್ಕೂ ಬ್ರಿಟಿಷರನ್ನೇ ಹೊಣೆಗಾರರನ್ನಾಗಿಸುತ್ತೇವೆ’.

ಈ ಮಾತನ್ನು ಆಧುನಿಕ ಭಾರತದ ಪ್ರತಿ ಇತಿಹಾಸಕಾರ, ಆದರ್ಶವಾದಿ ಕಿವಿಮೇಲೆ ಹಾಕಿಕೊಳ್ಳಬೇಕು.

ನಿಮ್ಮ ಅನಿಸಿಕೆ ತಿಳಿಸಿ: :  editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.