ADVERTISEMENT

ಕಾಫಿ ನಾಡಿನಲ್ಲಿ ಮನೆಗೊಂದು ಕೆರೆ

ಕೆ.ಎಂ.ಸಂತೋಷಕುಮಾರ್
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ಕಾಫಿ ನಾಡಿನಲ್ಲಿ ಮನೆಗೊಂದು ಕೆರೆ
ಕಾಫಿ ನಾಡಿನಲ್ಲಿ ಮನೆಗೊಂದು ಕೆರೆ   
ಕಾಫಿ ನಾಡಿನಲ್ಲಿ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಾರರು, ಕೃಷಿಕರು ಬೇಸಿಗೆಯಲ್ಲಿ ಬೆಳೆ ಉಳಿಸಿಕೊಳ್ಳಲು ತೋಟಗಳಲ್ಲಿ ನಿರ್ಮಿಸಿರುವ ಹೊಸ ಕೆರೆಗಳು, ಕಟ್ಟೆಗಳು, ಕೃಷಿ ಹೊಂಡಗಳು ಮೊಗೆದಷ್ಟು ‘ಅಕ್ಷಯ ಜಲಪಾತ್ರೆ’ಗಳಂತೆ ಕಾಣಿಸುತ್ತಿವೆ. 
 
ರಾಜ್ಯದಲ್ಲಿ ಮೂರು ಜಿಲ್ಲೆಗಳ  (ಹಾಸನ, ಕೊಡಗು, ಚಿಕ್ಕಮಗಳೂರು) ವ್ಯಾಪ್ತಿಯಲ್ಲಿ ಹರಡಿರುವ ಕಾಫಿ ನಾಡಿನಲ್ಲಿ ಸುಮಾರು 2.50 ಲಕ್ಷ ಮಂದಿ ಕಾಫಿ ಬೆಳೆಗಾರರು ಇದ್ದಾರೆ. ಇದರಲ್ಲಿ ಶೇ 98.2 ಮಂದಿ ಸಣ್ಣ ಬೆಳೆಗಾರರು.

 ಬಹುತೇಕ ಬೆಳೆಗಾರರು ಕಾಫಿ, ಕಾಳು ಮೆಣಸು ಕೃಷಿಗೆ ಕೊಳವೆ ಬಾವಿಗಳಿಗಿಂತಲೂ ಹೆಚ್ಚಾಗಿ ಕೆರೆ, ಕೃಷಿ ಹೊಂಡ ಅವಲಂಬಿಸಿದ್ದಾರೆ. ದೊಡ್ಡ ಬೆಳೆಗಾರರ ತೋಟಗಳಲ್ಲಿ ಹತ್ತು, ಹದಿನೈದು ಕೆರೆಗಳೂ ಇವೆ. ಬಹುತೇಕ ಸಣ್ಣ ಬೆಳೆಗಾರರು ಸ್ವಂತ ಕೆರೆ, ಕೃಷಿ ಹೊಂಡ ಹೊಂದಿದ್ದಾರೆ.  
 
ಕಾಫಿ ಬೆಳೆಯುವ ಮಲೆನಾಡಿನ ಪ್ರದೇಶಗಳಾದ ಚಿಕ್ಕಮಗಳೂರು ತಾಲ್ಲೂಕು, ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ, ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಕೊಡಗು ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ ತಾಲ್ಲೂಕುಗಳಲ್ಲಿ ಕಳೆದ ಒಂದು ದಶಕದಿಂದ ಹೊಸ ಕೆರೆಗಳ ನಿರ್ಮಾಣ ಹೆಚ್ಚುತ್ತಿದೆ.
 
ಇದಕ್ಕೆ ಕೃಷಿ, ತೋಟಗಾರಿಕೆ ಹಾಗೂ ಕಾಫಿ ಮಂಡಳಿಯ ಉತ್ತೇಜನವೂ ಸಿಗುತ್ತಿದೆ. ಮೂರು ಜಿಲ್ಲೆಗಳಲ್ಲಿ ಒಂದು ಅಂದಾಜಿನ ಪ್ರಕಾರ ಲಕ್ಷಕ್ಕೂ ಹೆಚ್ಚು ಹೊಸ ಕೆರೆಗಳು ಕಾಫಿ ತೋಟಗಳ ನಡುವೆಯೇ ನಿರ್ಮಾಣವಾಗಿವೆ. 
 
ಮೂಡಿಗೆರೆ ತಾಲ್ಲೂಕಿನ ಸಾರಗೋಡು, ಕುಂದೂರು ಭಾಗದಲ್ಲಿ ಸ್ವಂತ ಕೆರೆ ಹೊಂದಿಲ್ಲದವರು ಅತಿ ವಿರಳ. ‘ಮೈಲಿಗೊಂದು ಮನೆ, ಮನೆಗೊಂದು ಕೆರೆ’ ಎಂಬಂತಾಗಿದೆ. ಕುಂದೂರು ಪಕ್ಕದ ತಳವಾರ ಗ್ರಾಮದಲ್ಲಿರುವ 30 ಮಂದಿ ಕಾಫಿ ಬೆಳೆಗಾರರ ಪೈಕಿ, ಒಂಬತ್ತು ಬೆಳೆಗಾರರು ಸ್ವಂತ ಕೆರೆಗಳನ್ನು ಹೊಂದಿದ್ದಾರೆ.

ಪಕ್ಕದ ಬಾಸ್ತಿ ಗ್ರಾಮದ ಬೆಳೆಗಾರ ನಟೇಶ್‌ ಎಂಬುವವರು 40 ಎಕರೆ ತೋಟಕ್ಕಾಗಿ ನಾಲ್ಕು ಎಕರೆ ವಿಸ್ತೀರ್ಣದ ಕೆರೆ ನಿರ್ಮಿಸಿದ್ದಾರೆ. ಹೆಚ್ಚು ಮಳೆ ಬೀಳುವ ಈ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ರೋಬಸ್ಟಾ ತೋಟಗಳ ನಿರ್ವಹಣೆಗೆ ಬೆಳೆಗಾರರು ತಮ್ಮ ಸ್ವಂತ ಭೂಮಿಯಲ್ಲಿ ಕೆರೆಗಳನ್ನು ನಿರ್ಮಿಸಿ, ಮಳೆಗಾಲದಲ್ಲಿ ನೀರು ಶೇಖರಿಸಿಟ್ಟುಕೊಳ್ಳುತ್ತಾರೆ. 
 
ತಳವಾರದ ಯುವ ಬೆಳೆಗಾರ ನಯನ, ತಮ್ಮ ತೋಟದಲ್ಲಿರುವ 80X100 ಅಡಿ ವಿಸ್ತೀರ್ಣ, 25 ಅಡಿ ಆಳದ ಕೆರೆ ಒಮ್ಮೆ ಭರ್ತಿಯಾದರೆ ತೋಟಕ್ಕೆ ಸತತ 80 ಗಂಟೆ ನೀರು ಹಾಯಿಸಬಹುದು ಎನ್ನುತ್ತಾರೆ. ಕಾಫಿ, ಕಾಳು ಮೆಣಸು, ಅಡಿಕೆ ಯಶಸ್ವಿ ಬೆಳೆಗಾರರೆಲ್ಲರೂ ತಮ್ಮ ತೋಟ, ಎಸ್ಟೇಟ್‌ಗಳಲ್ಲಿ ಕಡ್ಡಾಯವಾಗಿ ಕೆರೆಗಳನ್ನು ಹೊಂದುತ್ತಿದ್ದಾರೆ. 
 
ಜಿಲ್ಲೆಯ ದೊಡ್ಡ ಬೆಳೆಗಾರ, ಕಾಫಿ ಡೇ ಗ್ಲೋಬಲ್‌ ಸಂಸ್ಥೆ ಮುಖ್ಯಸ್ಥ ವಿ.ಜಿ.ಸಿದ್ಧಾರ್ಥ ಅವರ ಎಸ್ಟೇಟ್‌ಗಳಲ್ಲಿ ನೂರಾರು ಕೆರೆಗಳಿವೆ. ತೋಟದಿಂದ ನೀರು ವ್ಯರ್ಥವಾಗಿ ಹೋಗದಂತೆ ತಗ್ಗು ಪ್ರದೇಶಗಳಲ್ಲಿ ಕೆರೆಗಳನ್ನು ನಿರ್ಮಿಸಿಕೊಂಡಿದ್ದಾರೆ.
 
ಶಾಶ್ವತ ಬರಪೀಡಿತ ತಾಲ್ಲೂಕಾಗಿ ಗುರುತಿಸಿಕೊಂಡಿರುವ ಕಡೂರು ಸಮೀಪದ ಸಖರಾಯಪಟ್ಟಣದಲ್ಲಿ ಮಾಜಿ ಶಾಸಕ ಎಸ್‌.ಎಲ್‌.ಧರ್ಮೇಗೌಡ ಅವರು ಅಡಿಕೆ ತೋಟದಲ್ಲಿ 100X200 ವಿಸ್ತೀರ್ಣ, 30 ಅಡಿ ಆಳದ ಖಾಸಗಿ ಕೆರೆ ಹೊಂದಿದ್ದಾರೆ. ಈಗ 125X250 ವಿಸ್ತೀರ್ಣದ ಮತ್ತೊಂದು ಕೆರೆ ನಿರ್ಮಾಣ ಆರಂಭಿಸಿದ್ದಾರೆ. ಜನರಿಗೂ ಮಳೆ ನೀರು ಸಂಗ್ರಹದ ಪಾಠ ಹೇಳುತ್ತಿದ್ದಾರೆ. 
 
ಕಾಫಿನಾಡಿನಲ್ಲಿ ಕೆಲ ಬೆಳೆಗಾರರು ಸಹಜವಾಗಿ ಹರಿಯುತ್ತಿದ್ದ ನೀರಿನ ಝರಿಗಳಿಗೆ ಧಕ್ಕೆಯಾಗುವಂತೆ, ಸಣ್ಣಪುಟ್ಟ ಹಳ್ಳಗಳ ಹರಿವಿನ ಪಥ ಬದಲಿಸಿ ಕೆರೆಗಳನ್ನು ನಿರ್ಮಿಸಿಕೊಂಡಿದ್ದಾರೆನ್ನುವ ಆಪಾದನೆಗಳಿವೆ.
 
ಹೆಗ್ಗುಡ್ಲು ಬಳಿಯ ಮತ್ತಿಕಟ್ಟೆಯಲ್ಲಿ ಭದ್ರಾ ನದಿಯ ಉಪನದಿ ‘ದೊಡ್ಡಹಳ್ಳ’ವನ್ನೇ ಬೆಳೆಗಾರರೊಬ್ಬರು ಸ್ವಂತ ಕೆರೆಗೆ ತಿರುಗಿಸಿ ನದಿ ಮೂಲ ಬತ್ತಲು ಕಾರಣರಾಗಿದ್ದಾರೆ ಎನ್ನುವ ಗಂಭೀರ ಆರೋಪವೂ ಇದೆ. ಜತೆಗೆ ಈ ರೀತಿ ಹೊಸ ಕೆರೆಗಳು ಹೆಚ್ಚುತ್ತಿರುವುದರಿಂದಾಗಿ ಸರ್ಕಾರಿ ಒಡೆತನದ ಪುರಾತನ ಕೆರೆಗಳಿಗೆ ನೀರು ಹರಿದು ಬರುತ್ತಿದ್ದ ಸವದಿ (ಜಾಡು) ಮುಚ್ಚಿ ಹೋಗುತ್ತಿದೆ ಎನ್ನುವ ಆಕ್ಷೇಪವೂ ಇದೆ. 
 
ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್‌.ಜೈರಾಮ್‌ ಅವರು ಮೂಡಿಗೆರೆ ಸಮೀಪದ ಬಿದರಹಳ್ಳಿಯಲ್ಲಿರುವ ತಮ್ಮ 40 ಎಕರೆ ವಿಸ್ತೀರ್ಣದ ಬಾಳೆಹಳ್ಳಿ ಎಸ್ಟೇಟ್‌ನಲ್ಲಿ 15 ವರ್ಷಗಳ ಹಿಂದೆಯೇ 80X100 ಅಡಿ ವಿಸ್ತೀರ್ಣ ಹಾಗೂ 20 ಅಡಿ ಆಳದ ಕೆರೆ ನಿರ್ಮಿಸಿಕೊಂಡಿದ್ದಾರೆ. ಇದರಲ್ಲಿ ಇಷ್ಟು ವರ್ಷ ಬತ್ತದ ಜಲ ಈ ಬಾರಿ ಬತ್ತಿದೆ. ಇದೇ ಎಸ್ಟೇಟ್‌ನಲ್ಲಿ ಇಷ್ಟೇ ಅಳತೆಯ ಮತ್ತೊಂದು ಕೆರೆ ನಿರ್ಮಿಸಲು ಅವರು ಕೈ ಹಾಕಿದ್ದಾರೆ. 
 
ಮಳೆಗಾಲದಲ್ಲಿ ಕೆರೆ ಭರ್ತಿಯಾದರೆ 20 ಎಕರೆ ರೋಬಸ್ಟಾ ತೋಟಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದು. ಈ ರೀತಿ ಕೆರೆಗಳನ್ನು ನಿರ್ಮಿಸಿಕೊಂಡು ನೀರಿನ ಸೌಲಭ್ಯ ಮಾಡಿಕೊಳ್ಳದಿದ್ದರೆ ರೋಬಸ್ಟಾ ಕಾಫಿ ಬೆಳೆಯುವುದು ಅಸಾಧ್ಯ ಎನ್ನುತ್ತಾರೆ ಅವರು.
 
10 ವರ್ಷಗಳ ಹಿಂದೆ ಕಾಫಿ ಬೆಳೆಯುವ  3 ಜಿಲ್ಲೆಗಳಲ್ಲಿ ಅಂದಾಜು 50 ಸಾವಿರ ಖಾಸಗಿ ಕೆರೆಗಳಿದ್ದವು. ಈ ವರ್ಷದಲ್ಲೇ 50 ಸಾವಿರಕ್ಕೂ ಹೆಚ್ಚು ಕೆರೆಗಳು, 20 ಸಾವಿರ ಕೃಷಿ ಹೊಂಡಗಳು ನಿರ್ಮಾಣವಾಗಿರುವ ಅಂದಾಜಿದೆ.   ಮುಂದಿನ ವರ್ಷ ಇನ್ನೂ ಒಂದು ಲಕ್ಷ ಹೊಸಕೆರೆಗಳು ನಿರ್ಮಾಣವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅವರು. 
 
**
ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿಯಲ್ಲಿ ಈ ವರ್ಷ 30 ಹೊಸ ಕೆರೆಗಳು ನಿರ್ಮಾಣವಾಗಿವೆ. ಕೊಳವೆ ಬಾವಿ ಕೊರೆಸಿ ಅಂತರ್ಜಲಕ್ಕೆ ಕನ್ನಹಾಕುವ ಬದಲು, ತೋಟದ ತಗ್ಗಿನ ಜಾಗದಲ್ಲಿ ಕೆರೆ ನಿರ್ಮಿಸುವುದು ಹೆಚ್ಚು ಸೂಕ್ತ
ಬಿ.ಎಸ್‌.ಜೈರಾಮ್‌, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.