ADVERTISEMENT

ಸೌಂಡ್‌ ಪೊಲ್ಯುಷನ್‌ ತಡೆಯಲು...!

ಡಿ.ಬಿ, ನಾಗರಾಜ
Published 1 ಡಿಸೆಂಬರ್ 2018, 20:00 IST
Last Updated 1 ಡಿಸೆಂಬರ್ 2018, 20:00 IST

ವಿಜಯಪುರ: ‘ಜಿಲ್ಲಾ ಪಂಚಾಯ್ತಿಯ 40 ಸದಸ್ಯರು ಸೇರಿದಂತೆ 50ಕ್ಕೂ ಹೆಚ್ಚು ಅಧಿಕಾರಿಗಳಿಗೆ ಮೂರೇ ಮೈಕ್‌ಗಳಿವೆ. ಇದ್ರಿಂದ ಚರ್ಚೆಯಲ್ಲಿ ಭಾಗಿಯಾಗಲಾಗ್ತಿಲ್ಲ. ನೀವ್‌ ನಮ್‌ ಹಕ್ಕನ್ನೇ ಕಿತ್ಕೊಳ್ತಿದ್ದೀರಿ...!’

‘ನಾವ್‌ ಇಲ್ಲಿ ಮಾತ್ನಾಡದೆ ಇನ್ನೆಲ್ಲಿ ಮಾತ್ನಾಡ್ಬೇಕು. ಪ್ರತಿ ಟೇಬಲ್‌ಗೂ ಒಂದೊಂದು ಮೈಕ್‌ ಕೊಡ್ರೀ ಮೊದ್ಲು... ಎಲ್ರಿಗೂ ಮೈಕ್‌ ಸಿಕ್ಕರೆ, ವಿಷಯ ತೋಚಿದವರು ತಕ್ಷಣಕ್ಕೆ ಪ್ರತಿಕ್ರಿಯಿಸುತ್ತಾರೆ’ ಎಂದು ಸಿಂದಗಿ ತಾಲ್ಲೂಕಿನ ಬಳಗಾನೂರ ಕ್ಷೇತ್ರದ ಬಿಜೆಪಿ ಸದಸ್ಯ ಬಿ.ಆರ್‌.ಎಂಟಮಾನ ಶುಕ್ರವಾರ ನಡೆದ ವಿಜಯಪುರ ಜಿಲ್ಲಾ ಪಂಚಾಯ್ತಿಯ 11ನೇ ಸಾಮಾನ್ಯ ಸಭೆಯಲ್ಲಿ ಸಿಇಒ ವಿಕಾಸ್‌ ಕಿಶೋರ್‌ ಸುರಳ್‌ಕರ್ ಅವರ ಕಾಲೆಳೆದರು.

ಸದಸ್ಯರ ಆಕ್ಷೇಪಕ್ಕೆ ಶಾಂತಚಿತ್ತರಾಗಿಯೇ ಮಾತಿನ ಜುಗಲ್‌ಬಂದಿಗೆ ಚಾಲನೆ ನೀಡಿದ ಸಿಇಒ, ‘ಶೀಘ್ರದಲ್ಲೇ ಸಭಾಂಗಣ ನವೀಕರಣಗೊಳ್ಳಲಿದೆ. ಆಗ ನಿಮ್‌ ಸಮಸ್ಯೆ ಬಗೆಹರಿಯಲಿದೆ. ಇದೀಗ ನಾವೇ ಸೌಂಡ್‌ ಪೊಲುಷನ್ ತಡೆಯಲು ಕಡಿಮೆ ಮೈಕ್‌ ಇಟ್ಕೊಂಡೀವಿ’ ಎನ್ನುತ್ತಿದ್ದಂತೆ, ಗಂಭೀರ ಚರ್ಚೆಯಲ್ಲಿ ತೊಡಗಿದ್ದ ಸಭೆ ನಗೆಗಡಲಲ್ಲಿ ತೇಲಿತು.

ADVERTISEMENT

‘ಒಬ್ಬೊಬ್ರಿಗೆ ಒಂದೊಂದ್‌ ಮೈಕ್‌ ಕೊಟ್ಟರೆ; ಎಲ್ರೂ ಒಮ್ಮೆಗೆ ಮಾತನಾಡ್ತೀರಿ. ಯಾರು ಏನ್‌ ಹೇಳಿದ್ರು ಎಂಬುದೇ ಗೊತ್ತಾಗಲ್ಲ. ನಮ್ಮಿಂದಲೇ ಶಬ್ದ ಮಾಲಿನ್ಯವಾಗುತ್ತೆ. ಇದನ್ನು ತಡೆಯಾಕ ಮೂರೇ ಮೈಕ್‌ ಇಟ್ಟೀವಿ. ಸಹಕರಿಸಿ’ ಎಂದು ತಣ್ಣಗೆ ಮತ್ತೊಮ್ಮೆ ತಮ್ಮ ಮಾತಿನ ಲಘು ಲಹರಿ ಝಳಪಿಸುತ್ತಿದ್ದಂತೆ; ಅಧಿಕಾರಿ ವರ್ಗ ಭಲೇ ಸಿಇಒ ಎಂದು ತಲೆದೂಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.