ನಮ್ಮ ಸಿ.ಎಂ. ಸಾಹೇಬರಿಗೆ ಯಾಕೋ ಈಚೆಗೆ ಟೈಮೇ ಸರಿ ಇದ್ದಂತಿಲ್ಲ...
ಯಾಕೆ ಹಾಗಂತೀಯ? ಎಲ್ಲಾ ಸರಿಯಾಗಿದೆ ಅಂತ ತಾನೆ ಮೂರು ದಿನ ತಂಪಾಗಿ ರಜಾ ತಕ್ಕೊಂಡು ಫ್ಯಾಮಿಲಿ ಜೊತೆ ಕಾಲ ಕಳೆದು ಬಂದದ್ದು...
ಅದೇನೊ ಸರಿ... ಆದರೆ, ಒಂದಿಲ್ಲೊಂದು ವಿವಾದದಲ್ಲಿ ತಗಲಾಕ್ಕೋತಾನೆ ಇದಾರಲ್ಲ. ಅದಕ್ಕೇ ಹಂಗಂದೆ. ಒಂದೋ, ಎಲ್ಲಾದಕ್ಕು ಕಣ್ಣೀರ್ ಹಾಕ್ತಾರೆ. ಇಲ್ಲಾಂದ್ರೆ, ಬಾಯಿಗ್ ಬಂದಂಗೆ ಮಾತಾಡ್ತಾರೆ.
ಅದೆಲ್ಲಾ ಮಾಮೂಲು. ಸಿ.ಎಂ. ಆದ್ಮೇಲೆ ಇದ್ದದ್ದೇಯ.
ಆದರೂನೂ ಮಾತಿನ ಮೇಲೆ ಸ್ವಲ್ಪ ನಿಗಾ ಇರಬೇಕಲ್ಲ. ಏನೋ... ರೈತರ ಮಗ ಅಂತ, ಶಾನೆ ಪ್ರೀತಿಯಿಂದ ರೈತರು ಗಲಾಟೆ ಮಾಡಕ್ ಬಂದ್ರೆ... ಮತ್ತೀನ್ನೇನು ಮಾಡಬೇಕಿತ್ತು? ಕಷ್ಟಪಟ್ಟು ಬೆಳೆದ ಕಬ್ಬನ್ನ ಸಪ್ಲೆ ಮಾಡಿದ್ರೂ ಕೊಡಬೇಕಾದ ದುಡ್ಡು ಕೊಡದೇ ಹೋದ್ರೆ, ಅಂಗೇ... ಈ ಸರ್ಕಾರಾನೂ ಅಷ್ಟೇ; ಬೆಳೆದು ನಿಂತ ಕಬ್ಬಿನ ಬೆಲೆ ನಿಗದಿ ಮಾಡಕ್ಕೆ, ಮೀನಮೇಷ ಎಣಿಸಬೇಕಾ?
ಅವ್ರೇನು ಮಾಡಲಿಕ್ಕಾಗುತ್ತೆ... ಸಕ್ಕರೆ ಕಾರ್ಖಾನೆಯವರು ದುಡ್ಡು ಕೊಡದಿದ್ರೆ?
ಯಾಕ್ ಕೊಡ್ತಿಲ್ಲ ಹೇಳು?
ಯಾಕೆ...?
ಆ ಕಾರ್ಖಾನೆಯ ಒಡೆಯರೆಲ್ಲಾ, ಇವರ ನೆಂಟರೇ. ಅಂದರೆ ರಾಜಕಾರಣಿಗಳೇ. ಅಂತಹವರನ್ನ ಮಾತನಾಡ್ಸಕ್ಕೆ, ಇವ್ರಿಗೂ ದಮ್ಮಿಲ್ಲ, ಇಷ್ಟಾನೂ ಇಲ್ಲ. ಕೊಟ್ಬಿಡಪ್ಪಾ ಅಂದ್ರೆ, ಕೊಟ್ಬಿಡ್ತಾರಾ...?
ಹಂಗಾ!
ಕೊಡೋದು ಬಿಡೋದು ಇರಲಿ.
ಸಿ.ಎಂ. ಆದವರಿಗೆ ಮಾತಿನ ನಿಗಾ ಬೇಕಲ್ಲ.
ಆಯಮ್ಮಾನೆ ಏನೋ ಅಂದ್ಲಂತೆ, ಅವಮಾನ ಮಾಡೋಹಂಗೆ...
ಆಯಮ್ಮ ಕೋಪದಲ್ಲಿ ಏನೋ ಅಂದ್ರೆ, ಇವರೂ ಅಂಗೇ ಮಾತಾಡೋದಾ?
ಸಿ.ಎಮ್ಮು ಅವಮಾನ ಮಾಡ್ಲೇ ಇಲ್ಲಾ ಅಂತ ಕೆಲವರು ಹೇಳ್ತಾರಲ್ಲಾ...?
ಅವರೆಲ್ಲಾ ಅವರ ಕಡೆ ಜನಾನೇ ಇರ್ಬೇಕು.
ಕೆಲವು ದಿನಗಳ ಹಿಂದೆ, ಬಿಜೆಪಿಯವರ ಮಾತಿಗೆ ಪ್ರತಿಯಾಗಿ ರಾಜ್ಯದ ಜನ ದಂಗೆ ಏಳಬೇಕಾಗುತ್ತೆ ಅಂದಿದ್ದರಲ್ಲ. ಆಗ ದಂಗೆ ಅಂದದ್ದು ಕಬ್ಬಿನ ಜಲ್ಲೆ ರೂಪದಲ್ಲಿ ತಿರುಗಿ ಚುಚ್ಚಿದಂಗಾಯಿತೇ? ರಿವರ್ಸ್ ಗೇರ್ ಅಂದರೆ ಇದೇನಾ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.