ಚುರುಮುರಿ: .
ಗೋಪಾಲಿ, ವೈಶಾಲಿ ಬಂದು, ‘ಮಗನ ಮದ್ವೆ ಇದೆ, ಕುಟುಂಬ ಸಮೇತ ಬನ್ನಿ’ ಎಂದು ಕಾರ್ಡ್ ಕೊಟ್ಟರು.
‘ಶುಭವಾಗಲಿ’ ಎಂದ ಶಂಕ್ರಿ, ‘ಇದೇನ್ರೀ, ಕಾರ್ಡಿನಲ್ಲಿ ಮೂರು ಕಡೆ ಕಲ್ಯಾಣ ಮಂಟಪದ ಲೊಕೇಶನ್ನ ಕ್ಯೂಆರ್ ಕೋಡ್ ಹಾಕಿಸಿದ್ದೀರಿ?’ ಅಂದ.
‘ಒಂದು ಚೌಲ್ಟ್ರಿ ಲೊಕೇಶನ್, ಇನ್ನೆರಡು ಮುಯ್ಯಿ ಪೇ ಮಾಡಲು ಗಂಡು, ಹೆಣ್ಣಿನ ಕಡೆಯವರ ಪ್ರತ್ಯೇಕ ಬ್ಯಾಂಕ್ ಅಕೌಂಟ್ ಸ್ಕ್ಯಾನರ್ ಕೋಡ್’ ಎಂದ ಗೋಪಾಲ.
‘ಒಳ್ಳೆಯದಾಯ್ತು, ರಿಸೆಪ್ಷನ್ ಕ್ಯೂನಲ್ಲಿ ನಿಂತು ಮುಯ್ಯಿ ಕೊಡೋದು ತಪ್ಪುತ್ತದೆ, ಸ್ಕ್ಯಾನ್ ಮಾಡಿ ಮುಯ್ಯಿ ದುಡ್ಡು ಹಾಕಿ ನೇರವಾಗಿ ಊಟಕ್ಕೆ ಹೋಗಬಹುದು’ ಎನ್ನುತ್ತಾ ಸುಮಿ ತಿಂಡಿ ತಂದುಕೊಟ್ಟಳು.
‘ಬೇರೆ ಜಾತಿ ಸಂಬಂಧ ಅಂತ ಕೇಳಿಪಟ್ಟೆ, ಹೌದಾ?’
‘ನಮ್ಮ ಜಾತಿಯಲ್ಲಿ ಹೆಣ್ಣು ಸಿಗೋದು ಕಷ್ಟ, ಮಗ ಅನ್ಯ ಜಾತಿ ಹುಡುಗೀನ ಲವ್ ಮಾಡಿದ್ದ, ಅವಳ ಜೊತೆಗೇ ಮದ್ವೆ ಮಾಡ್ತಿದ್ದೀವಿ’ ವೈಶಾಲಿ ಇರೋ ವಿಚಾರ ಹೇಳಿದಳು.
‘ಜಾತಿ ಜನಗಣತಿ ಪ್ರಕಾರ ಅವರ ಜಾತಿಯ ಜನಸಂಖ್ಯೆ ಎಷ್ಟಿದೆ?’
‘ತುಂಬಾ ಕಮ್ಮಿ ಇದೆ, ಸ್ವಲ್ಪಸಂಖ್ಯಾತರು. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರಂತೆ. ನಿಮ್ಮ ಮಗಳಿಗೆ ಗಂಡು ಹುಡುಕ್ತಿದ್ದೀರಲ್ಲ, ಸೆಟ್ ಆಯ್ತಾ?’ ಗೋಪಾಲಿ ಕೇಳಿದ.
‘ನಮ್ಮದೂ ಬೇರೆ ಜಾತಿಯ ಸಂಬಂಧ. ಅವರು ನಮ್ಮ ಜಾತಿಯ ಜನಸಂಖ್ಯೆಗಿಂತ ಸಂಖ್ಯೆಯಲ್ಲಿ ತುಂಬಾ ಹೆಚ್ಚಿದ್ದಾರೆ. ಅವರಲ್ಲಿ ಐದು ಜನ ಶಾಸಕರು, ಇಬ್ಬರು ಮಂತ್ರಿಗಳಿದ್ದಾರೆ ಕಣ್ರೀ, ಪ್ರಬಲ ಜಾತಿಯ ಸಂಬಂಧ ಬೆಳೆಸ್ತಿದ್ದೀವಿ’ ಶಂಕ್ರಿ ಬೀಗಿದ.
‘ನಮ್ಮ ಜಾತಿಯ ಜನಗಣತಿ ಅವೈಜ್ಞಾನಿಕ, ಮರುಸಮೀಕ್ಷೆ ಮಾಡಬೇಕೆಂದು ಒತ್ತಾಯಿಸಿ ನಮ್ಮ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಸರ್ಕಾರಕ್ಕೆ ನಿಯೋಗ ತೆರಳಲು ತೀರ್ಮಾನ ಮಾಡಿದ್ದೀವಿ’ ಎಂದು ಗೋಪಾಲಿ ಹೊರಡಲು ಎದ್ದ. ವೈಶಾಲಿಗೆ ಸುಮಿ ಕುಂಕುಮ ಕೊಟ್ಟಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.