ಬಿಬಿಎಂಪಿ ಕಚೇರಿ ಎದುರು ಬೀದಿನಾಯಿಗಳು ನಾಲಿಗೆ ಚಾಚಿಕೊಂಡು ಕುಳಿತಿದ್ದವು.
ಹಿರಿಯ ಅಧಿಕಾರಿ ಬಂದು, ‘ನಾಯಿಗಳು ಪ್ರತಿಭಟನೆ ಮಾಡ್ತಿವೆಯೇನ್ರೀ?’ ಎಂದು ಕೇಳಿದರು.
‘ಬಾಡು ಭಾಗ್ಯ ಯೋಜನೆ ಯಾವಾಗಿನಿಂದ, ಮೆನು ಏನೇನು ಎಂದು ತಿಳಿಯಲು ನಾಯಿಗಳು ಬಂದಿರಬಹುದು ಸಾರ್’ ಕಿರಿಯ ಅಧಿಕಾರಿ ಹೇಳಿದರು.
‘ಬಾಡು ಭಾಗ್ಯ ಯೋಜನೆಯನ್ನು ಪ್ರಾಣಿದಯಾ ಸಂಘದವರು ಸ್ವಾಗತಿಸಿದ್ದಾರೆ ಕಣ್ರೀ’.
‘ಆದರೆ, ಪ್ರಾಣಿ ಭಯಾ ಸಂಘದವರು ಆಕ್ಷೇಪ ಮಾಡಿದ್ದಾರೆ. ನಾಯಿಗಳಿಗೆ ಮಾಂಸದ ರುಚಿ ತೋರಿಸಿದರೆ ಮನುಷ್ಯರನ್ನು ಕಚ್ಚುತ್ತವಂತೆ’.
‘ಬಾಡು ಭಾಗ್ಯ ಉಂಡುಕೊಂಡಿರಿ, ಮನುಷ್ಯರ ಮೇಲೆ ದಾಳಿ ಮಾಡಬೇಡಿ ಎಂದು ನಾಯಿ ತಜ್ಞರಿಂದ ನಾಯಿಗಳಿಗೆ ಬುದ್ಧಿ ಹೇಳಿಸಬೇಕು’.
‘ಕಚ್ಚೋದು, ಬೊಗೊಳೋದು ನಾಯಿಗಳ ಹುಟ್ಟುಗುಣ ಸಾರ್. ಪ್ಲೇಟ್ ಮೀಲ್ಸ್ ಕೊಟ್ಟರೆ ಅವು
ಮನುಷ್ಯರನ್ನು ಕಚ್ಚುತ್ತವೆ, ಫುಲ್ ಮೀಲ್ಸ್ ಕೊಟ್ಟರೆ ತಿಂದು ತೆಪ್ಪಗಿರ್ತವೆ’.
‘ನಾಯಿಗಳು ಉಭಯ ಆಹಾರಿಗಳು. ವೆಜ್, ನಾನ್ವೆಜ್ ಎರಡನ್ನೂ ತಿನ್ನುತ್ತವೆ’.
‘ಮಾಂಸದ ರುಚಿ ಕಂಡ ನಾಯಿಗಳು ಅನ್ನ–ಸಾಂಬಾರ್ ಮೂಸಿ ನೋಡಲ್ಲ ಸಾರ್...’
ಅಷ್ಟೊತ್ತಿಗೆ ನಾಯಿಗಳ ಇನ್ನೊಂದು ಗುಂಪು ಬಂತು. ಈ ನಾಯಿಗಳು ಆ ನಾಯಿಗಳ ಮೇಲೆ ದಾಳಿ ಮಾಡಿ ಕಚ್ಚಾಡಿದವು.
‘ಯಾಕ್ರಿ ನಾಯಿಗಳು ಹೀಗೆ ಕಚ್ಚಾಡ್ತಿವೆ?’ ಎಂದು ಹಿರಿಯ ಅಧಿಕಾರಿ ಕೇಳಿದರು.
‘ಸಾರ್, ಬಾಡು ಭಾಗ್ಯ ಅರಸಿ ಹೊರ ಊರಿನಿಂದ ಬೆಂಗಳೂರಿಗೆ ವಲಸೆ ಬಂದ ನಾಯಿಗಳವು. ಅಕ್ರಮ ನಿವಾಸಿಗಳ ವಿರುದ್ಧ ಮೂಲ ನಿವಾಸಿಗಳು ಸಿಟ್ಟಿಗೆದ್ದಿವೆ’.
‘ಬೆಂಗಳೂರು ನಾಯಿಗಳಿಗೆ ವಾಸಸ್ಥಳ ಪತ್ರ ವಿತರಿಸಿ’.
‘ನಾಯಿಗಳು ಪತ್ರವನ್ನು ಎಲ್ಲಿ ಇಟ್ಟುಕೊಳ್ತವೆ ಸಾರ್? ಪತ್ರದ ಬದಲು ಬಿಬಿಎಂಪಿಯ ಬೆಲ್ಟ್ ಕಟ್ಟಿ ನಮ್ಮ ನಾಯಿಗಳನ್ನು ದೃಢೀಕರಿಸಿಕೊಳ್ಳೋಣ’ ಎಂದರು ಕಿರಿಯ ಅಧಿಕಾರಿ.
‘ವೆರಿ ಗುಡ್, ಒಳ್ಳೆಯ ಐಡಿಯಾ...’ ಎಂದು ಹಿರಿಯ ಅಧಿಕಾರಿ ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.