ADVERTISEMENT

ಚುರುಮುರಿ: ಸೋತವನೇ ಶ್ರೀಸಾಮಾನ್ಯ!

ಸುಮಂಗಲಾ
Published 20 ಫೆಬ್ರುವರಿ 2022, 19:30 IST
Last Updated 20 ಫೆಬ್ರುವರಿ 2022, 19:30 IST
ಚುರುಮುರಿ
ಚುರುಮುರಿ   

‘ಒಂದ್ ಹೊಸ ಆಟ ಆಡೂಣು. ನಮ್ಮ ದೇಶದ ಇತ್ತೀಚಿನ ಪ್ರಚಂಡ ಸುದ್ದಿ ನಾ ಒಂದ್ ಹೇಳ್ತೀನಿ, ಅದನ್ನು ಮೀರಿಸುವಂಥದು ನೀ ಒಂದ್ ಹೇಳಬಕು, ಇಸ್ಪೀಟ್ ಎಲೆ ಹಾಕಿದಂಗೆ. ರೆಡಿನಾ’ ಬೆಕ್ಕಣ್ಣ ಆಟದ ಹುರುಪಿನಲ್ಲಿತ್ತು.

‘ಎಲ್ಲಾ ಕಡಿಗಿ ಬುಲೆಟ್ ರೈಲು ಬಿಟ್ಟಿದ್ದಾಯ್ತು. ಈಗ ನಮ್ಮ ಗಡ್ಕರಿ ಮಾಮಾರು ಬಸ್ ಹಾರಿಸ ತಾರಂತ. ದಿಲ್ಲಿಯಿಂದ ಪ್ರಯಾಗ್ ರಾಜ್ ತನಕ ಹಾರೋ ಬಸ್ ಶುರು ಮಾಡ್ತಾರಂತ. ಎಂಥಾ ಪ್ರಚಂಡ ಸುದ್ದಿ, ಹೌದಿಲ್ಲೋ’.

‘ಕೋವಿಡ್ ಬಂದಾಗಿನಿಂದ ಹಣಕಾಸು ಸ್ಥಿತಿ ಮಕಾಡೆ ಮಲಗೈತಿ ಅನ್ನೂದೆಲ್ಲ ಸುಳ್ಳು. ನಮ್ಮ ದೇಶದಾಗೆ ಜನಸಾಮಾನ್ಯರ ಸಂತೋಷದ ಸೂಚ್ಯಂಕ ಇಳಿದರೇನಾತು, ಕೋಟ್ಯಧೀಶರ ಸಂಖ್ಯೆ ಕಳೆದ ವರ್ಷಕ್ಕಿಂತ ಹನ್ನೊಂದು ಪರ್ಸೆಂಟ್ ಹೆಚ್ಚಾಗೈತಂತ ಹರೂನ್ ಇಂಡಿಯಾ ಸಮೀಕ್ಷೆ ಹೇಳೈತಿ. ಎಂಥಾ ಅದ್ಭುತ ಪ್ರಗತಿ...’ ನಾ ಹೆಮ್ಮೆಯಿಂದ ಹೇಳಿದೆ.

ADVERTISEMENT

‘ಅದಕ್ಕಿಂತ ಅದ್ಭುತ ಪ್ರಗತಿ ಯೋಗಿ ಮಾಮಾನ ರಾಜ್ಯದಾಗೆ ಆಗೈತಿ. ಸ್ವಾತಂತ್ರ್ಯ ಬಂದಾಗಿನಿಂದ ಕಳೆದ ಎಪ್ಪತ್ತು ವರ್ಷದಾಗೆ ಯುಪಿವಳಗೆ ಎಷ್ಟು ಹೈವೇ ಮಾಡಿದ್ರೋ ಅದ್ರ ಮೂರು ಪಟ್ಟು ಯೋಗಿ ಮಾಮಾ ಬಂದ ಮ್ಯಾಗೆ ಐದೇ ವರ್ಷದಾಗೆ ಮಾಡ್ಯಾನ ಅಂತ ನಮ್ಮ ತೇಜಸ್ವಿಯಣ್ಣ ಹೇಳ್ಯಾನೆ’ ಎಂದು ಮತ್ತೊಂದು ಇಸ್ಪೀಟಿನ ಎಲೆ ಒಗೆಯಿತು.

‘ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ ಗೊತ್ತೈತಿಲ್ಲೋ... ದಿನಕ್ಕೆ ಸುಮಾರು 64,000 ಕೋಟಿ ರೂಪಾಯಿ ವ್ಯವಹಾರ ನಡೆಸತೈತೆ. ಹಿಂಥಾ ದೊಡ್ಡ ಸಂಸ್ಥೇನ ಆತ್ಮಾವತಾರದಲ್ಲಿರೋ ಹಿಮಾಲಯದ ನಿಗೂಢ ಯೋಗಿಯೊಬ್ಬರ ನಿರ್ದೇಶನದಂತೆ ನಡೆಸ್ತಿದ್ದೆ ಅಂತ ಮಾಜಿ ಸಿಇಒ ಚಿತ್ರಕ್ಕ ಹೇಳ್ಯಾಳೆ. ನಿಗೂಢ ಯೋಗಿಯ ಇ-ಮೇಲ್ ಸಿಕ್ಕಿ ಮೂರು ವರ್ಷ ಆಗಿದ್ರೂ, ಯಾರು ಅಂತ ಪತ್ತೆ ಮಾಡಾಕೆ ಸೆಬಿಗೆ ಇನ್ನಾತನಾ ಆಗಿಲ್ಲಂತ’ ಇಸ್ಪೀಟಿನ ಟ್ರಂಪ್ ಕಾರ್ಡ್ ಎಸೆದು ‘ನಾನೇ ಗೆದ್ದೆ’ ಎಂದೆ.

‘ಗೆದ್ದಿದ್ದು ಆ ಹಿಮಾಲಯದ ಯೋಗಿ... ಯಾವಾಗ್ಲೂ, ಎಲ್ಲಾದ್ರಲ್ಲೂ ಸೋತುಸುಣ್ಣ ಆಗೋರು ನೀವು ಶ್ರೀಸಾಮಾನ್ಯರು’ ಬೆಕ್ಕಣ್ಣ ಮುಸಿಮುಸಿ ನಕ್ಕಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.