‘25 ಕಿಲೊ ಬಂಗಾರ, 50 ಕಿಲೊ ಬೆಳ್ಳಿ, 250 ಕೋಟಿಗೂ ಮೀರಿದ ಕ್ಯಾಶ್! ಇದೇನು ಕುಬೇರನ ಖಜಾನೆನಾ?’
‘ಯಾರ ಬಗ್ಗೆ ಹೇಳ್ತಿದೀಯ ನೀನು?’
‘ಅದೇರಿ, ಮೊನ್ನೆ ಕಾನ್ಪುರದಲ್ಲಿ ಒಬ್ಬ ಉದ್ಯಮಿ ಮನೆ ಮೇಲೆ ಐ.ಟಿ ರೇಡ್ ಮಾಡಿದಾಗ ಸಿಕ್ಕಿದ ಸಂಪತ್ತು. ಒಂದು ರೂಮ್ ತುಂಬಾ ಬರೀ 500, 2000 ರೂಪಾಯಿ ನೋಟು ಇಟ್ಟಿಗೆ ತರಹಾ ಜೋಡಿಸಿದ್ದರಂತೆ’.
‘ಬಹುಶಃ ಅಷ್ಟು ಕ್ಯಾಶ್ ಇದೆ ಅಂತ ಮಾಲೀಕರಿಗೇ ಗೊತ್ತಿತ್ತೋ ಇಲ್ಲವೋ...’
‘ಪಾಪ! ಐ.ಟಿ ಮಂದಿ ಎಣಿಸಿ ಎಣಿಸಿ ಸುಸ್ತಾದರಂತೆ’.
‘ಬಚ್ಚಿಟ್ಟಿದ್ದು ಪರರಿಗೆ ಅಂತ ಕಪ್ಪುಹಣ ಇಲ್ಲದೆ ಇರೋ ಸಮಯದಲ್ಲೇ ನಮ್ಮ ಸರ್ವಜ್ಞ ಹೇಳಿದ್ದರಲ್ಲ’.
‘ನಮ್ಮ ಮನೇಲೂ ಹಾಗೇ ಒಂದಿಷ್ಟು ಆಸ್ತಿ ಇದೇರಿ’.
‘ನಮ್ಮ ಮನೇಲಿದೆಯಾ?!’
‘ಅದೇರಿ, ನಿಮ್ಮ ಶಾಶ್ವತ ಸಾಹಿತ್ಯ ಎಂಬ ಆಸ್ತಿ. ನಿಮ್ಮ ಖರ್ಚಾಗದೇ ಇರೋ ಪುಸ್ತಕಗಳು’.
‘ಓ! ಅದಾ, ನಾನು ಎಲ್ಲೋ ಬೆಳ್ಳಿ ಬಂಗಾರ ಬಿಡು, ಅಟ್ಲೀಸ್ಟ್ ಒಂದಿಷ್ಟು ಕ್ಯಾಶ್ ಇದೆಯೇನೋ ಅಂತ ಅಂದುಕೊಂಡಿದ್ದೆ’.
‘ಎಲ್ಲ ಅಟ್ಟದ ಮೇಲಿವೆ ಆ ಪುಸ್ತಕಗಳು. ಅವೆಲ್ಲ ಖರ್ಚಾಗಿದ್ದಿದ್ದರೆ ನಾನು ಇನ್ನೊಂದು ಸೀರೇನಾದರೂ ತಗೊಬಹುದಿತ್ತು. ಖರ್ಚಾಗದೆ ಶಾಶ್ವತ ಸಾಹಿತ್ಯವಾಗಿ ಉಳಿದಿದೆ. ಕಪ್ಪುಹಣದ ಬಂಡಲ್ಗಳಂತೆ’.
‘ಎಲ್ಲಾದಕ್ಕೂ ಒಂದು ಕಾಲ ಬರಬೇಕು’.
‘ನನಗೊಂದು ಐಡಿಯಾ. ಈ ಐ.ಟಿ ದಾಳಿ ತರಹ ಪುಸ್ತಕ ಪ್ರಾಧಿಕಾರದೋರು ನಿಮ್ಮಂತಹ ಶಾಶ್ವತ ಸಾಹಿತಿಗಳ ಮನೆಗಳ ಮೇಲೆ ದಾಳಿ ಮಾಡಿ ಖರ್ಚಾಗದೆ ಉಳಿದಿರೋ ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಂಡರೆ ನನಗ ಒಂದಿಷ್ಟು ಜಾಗಾನಾದರೂ ಸಿಗುತ್ತೆ’ ಎಂದು ಹೇಳಿ ಎದ್ದು ಹೋದಳು ಹೆಂಡತಿ.
ಈಗಾಗಲೇ ಪ್ರಾಧಿಕಾರದ ಗೋಡೌನಿನಲ್ಲಿ ಇಂತಹ ಶಾಶ್ವತ ಸಾಹಿತ್ಯದ ಎಷ್ಟು ಬಂಡಲ್ಗಳಿವೆಯೋ ಏನೋ? ಯಾರಿಗೆ ಗೊತ್ತು?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.